ತೆಲಂಗಾಣ : ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹಿರಿಯ ಎಬಿವಿಪಿ ನಾಯಕ ಹಾಗೂ ಮಾಜಿ ಎಂಎಲ್ಸಿ ಎನ್.ರಾಮಚಂದ್ರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ ಅವರ ಬಳಿಕ ರಾಮಚಂದ್ರ ರಾವ್ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದು,
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೋಭಾ ಕರಂದ್ಲಾಜೆ ನೇಮಕ ಪತ್ರ ನೀಡಿದರು. ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿ ರಾಮಚಂದ್ರ ರಾವ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ರಾವ್ ಅವರು ರಾಜ್ಯದಲ್ಲಿ ಪಕ್ಷದ ಸಿದ್ದಾಂತ ಮತ್ತು ಸಂಘಟನೆಯನ್ನು ಬಲಗೊಳಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆಗೆ ರಾವ್ ಒಬ್ಬರೇ ಅರ್ಜಿ ಸಲ್ಲಿಸಿದ್ದರು.
ಉತ್ತರಾಖಂಡ್ ಬಿಜೆಪಿ ಅಧ್ಯಕ್ಷರಾಗಿ ರಾಜ್ಯಸಭಾ ಸಂಸದ ಮಹೇಂದ್ರ ಭಟ್ ಮರು ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಹಿರಿಯ ನಾಯಕರು ಹಾಗೂ ರಾಜ್ಯ ಉಸ್ತುವಾರಿ ದುಷ್ಯಂತ್ ಗೌತಮ್ ಉಪಸ್ಥಿತಿಯಲ್ಲಿ ಪಕ್ಷದ ಕೇಂದ್ರ ವೀಕ್ಷಕ ಹರ್ಷ ಮಲ್ಹೋತ್ರಾ ಭಟ್ ಪುನರ್ ಆಯ್ಕೆಯನ್ನು ಘೋಷಿಸಿದರು. ಬಳಿಕ ಮಾತನಾಡಿದ ಭಟ್, "ಕೇಂದ್ರ ನಾಯಕತ್ವವು ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ಅಧಿಕಾರ ನೀಡಿದ್ದಕ್ಕೆ ಧನ್ಯವಾದಗಳು. ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ಕಾರ್ಯ ಮುಂದುವರೆಸುತ್ತೇನೆ" ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧ್ಯಕ್ಷರೊಬ್ಬರು ಆಯ್ಕೆಯಾಗಿದ್ದಾರೆ. ಚುನಾವಣೆಗೆ ಭಟ್ ಒಬ್ಬರೇ ಅರ್ಜಿ ಸಲ್ಲಿಸಿದ್ದರು. 2022ರಲ್ಲಿ ಮೊದಲ ಬಾರಿಗೆ ಉತ್ತರಾಖಂಡ್ ಬಿಜೆಪಿ ಅಧ್ಯಕ್ಷರಾಗಿ ಇವರು ಆಯ್ಕೆಯಾಗಿದ್ದರು.