ಮುಂಬೈ: 1ನೇ ತರಗತಿಯಿಂದ ಶಾಲೆಗಳಲ್ಲಿ ಹಿಂದಿ ಹೇರಿಕೆ ವಿರುದ್ಧದ ಅಸಮಾಧಾನದ ಕೂಗು ಹೆಚ್ಚುತ್ತಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಲು ರಾಜ್ ಮತ್ತು ಉದ್ಧವ್ ಠಾಕ್ರೆ ಒಂದಾಗಲು ಮುಂದಾಗಿದ್ದಾರೆ. ಸಹೋದರ ಸಂಬಂಧಿಗಳಾಗಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಇಬ್ಬರು ತದ್ವಿರುದ್ಧ ದಿಕ್ಕುಗಳಾಗಿದ್ದರು. ಆದರೆ, ಇದೀಗ ಅವರು ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ಮರಾಠಿ ಭಾಷೆಯ ಕಾರಣದಿಂದ ಒಗ್ಗೂಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಜುಲೈ 5ರಂದು ಪ್ರಾಥಮಿಕ ಹಂತದಲ್ಲೇ ತ್ರಿಭಾಷಾ ಕಲಿಕೆ ವಿರೋಧಿಸಿ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದ್ದು, ಯುಬಿಸಿ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಒಂದೇ ವೇದಿಕೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗುರುವಾರ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ನಾಯಕರು ತ್ರಿ ಭಾಷಾ ಸೂತ್ರ ಹಾಗೂ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಜುಲೈ 7 ರಂದು ಆಜಾದ್ ಮೈದಾನದಲ್ಲಿ ನಾಗರಿಕ ಸಮಾಜ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಉದ್ಧವ್ ಠಾಕ್ರೆ ಘೋಷಿಸಿದ್ದರೆ, ಜುಲೈ 6 ರಂದು ಗಿರ್ಗಾಂವ್ ಚೌಪಟ್ಟಿಯಿಂದ ರಾಜಕೀಯೇತರ ಮೆರವಣಿಗೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಈ ಪ್ರತಿಭಟನೆಗೆ ಶಿವಸೇನೆ ಸೇರಿದಂತೆ ಎಲ್ಲಾ ರಾಜಕೀಯ ಸಂಘಟನೆಗಳ ನಾಯಕರನ್ನು ಆಹ್ವಾನಿಸುವುದಾಗಿ ರಾಜ್ ಘೋಷಿಸಿದ್ದರು.