ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿಯನ್ನು ಭಾರತ ಸರ್ಕಾರ ಖಂಡಿಸದೇ ಇರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೇ, ಪ್ರಾಂತೀಯ ಶಾಂತಿಗಾಗಿ ಇರಾನ್ ರಾಜತಾಂತ್ರಿಕ ಮಾತುಕತೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದು ಅಪಹಾಸ್ಯ ಎಂದು ಟೀಕಿಸಿದೆ. ಇರಾನ್ ಮೇಲೆ ಅಮೆರಿಕ ದಾಳಿ ಮಾಡಿ, ಶಾಂತಿ ಸಂಧಾನಕ್ಕೆ ಬರಬೇಕು ಎಂದು ಕರೆ ನೀಡಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಆದಾಗ್ಯೂ ಇರಾನ್ ಜೊತೆಗೆ ತಕ್ಷಣದ ರಾಜತಾಂತ್ರಿಕ ಮಾತುಕತೆಯಿಂದ ಸಂಘರ್ಷವನ್ನು ನಿಲ್ಲಿಸಬೇಕು ಎಂದು ಹೇಳಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಭಾರತ ಸರ್ಕಾರವು ಇರಾನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಮೆರಿಕದ ಬಾಂಬ್ ದಾಳಿ ಮತ್ತು ಇಸ್ರೇಲ್ನ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಟೀಕಿಸಿಲ್ಲ ಅಥವಾ ಖಂಡಿಸಿಲ್ಲ ಯಾಕೆ?" ಎಂದು ಪ್ರಶ್ನಿಸಿದ್ದಾರೆ.
"ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೈನಿಯನ್ನರ ಮೇಲೆ ನಡೆಯುತ್ತಿರುವ ನರಮೇಧದ ಬಗ್ಗೆಯೂ ಜಾಣ ಮೌನ ವಹಿಸಲಾಗಿದೆ. ಇದೀಗ, ಇರಾನ್ ಮೇಲಿನ ದಾಳಿಯಲ್ಲೂ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಈಗಲಾದರೂ, ಅಮೆರಿಕ ಮತ್ತು ಇಸ್ರೇಲ್ನ ದಾಳಿಯನ್ನು ಭಾರತ ಸರ್ಕಾರ ಟೀಕಿಸಬೇಕು. ಸಂಘರ್ಷ ಕೊನೆಗಾಣಲು ರಾಜತಾಂತ್ರಿಕ ಮಾತುಕತೆಗಳು ನಡೆಯಬೇಕು" ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪ್ರಶ್ನಿಸಿದ್ದರು. ಗಾಜಾ ಮತ್ತು ಇರಾನ್ನಲ್ಲಿ ಇಸ್ರೇಲ್ನ ವಿನಾಶಕಾರಿ ದಾಳಿಯ ಬಗ್ಗೆ ಭಾರತದ ಮೌನವನ್ನು ಟೀಕಿಸಿದ್ದರು. ಈ ಕುರಿತು ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದ ಅವರು ಅದರಲ್ಲಿ, ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿದ್ದರು.