ಮಹಾರಾಷ್ಟ್ರ : ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿ ನಡುವೆಯೇ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಹೋಟೆಲ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಾಂದ್ರಾ ಪ್ರದೇಶದ ಪಂಚತಾರಾ ಹೋಟೆಲ್ನಲ್ಲಿ ಸಿಎಂ ಫಡ್ನವೀಸ್ ಮತ್ತು ರಾಜ್ ಠಾಕ್ರೆ ಭೇಟಿಯಾಗಿದ್ದು, ಈ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಈ ಕುರಿತು ಬಿಜೆಪಿ ಮುಖ್ಯ ವಕ್ತಾರ ಕೇಶವ್ ಉಪಾಧ್ಯೆ ಅವರನ್ನು ಸಂಪರ್ಕಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಇಬ್ಬರು ನಾಯಕರು ಉತ್ತಮ ಸ್ನೇಹಿತರು ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಭೇಟಿಯಾಗಿರಬಹುದು ಎಂದು ಹೇಳಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗುತ್ತಿವೆ. ಸರ್ಕಾರ ಈ ವಾರ ಮುಂಬೈ ಸೇರಿದಂತೆ 29 ಮಹಾನಗರ ಪಾಲಿಕೆಗಳಿಗೆ ವಾರ್ಡ್ ವಿಂಗಡಣೆಗೆ ಆದೇಶ ನೀಡಿದ್ದು, ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಚುನಾವಣೆಗೂ ಮುನ್ನ ಠಾಕ್ರೆ ಸಹೋದರರ ನಡುವೆ ಹೊಂದಾಣಿಕೆಯಾಗುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.