ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ನೀಡಿದ ಹೇಳಿಕೆಯು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಎರಡೂ ಪಕ್ಷಗಳ ನಡುವೆ ಈ ಬಗ್ಗೆ ವಾಕ್ಸಮರ ಶುರುವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮೋದಿ ತಡೆದರು. ಆಗ, ಟ್ರಂಪ್ಗೆ ಮೋದಿ ಶರಣಾದರು ಎಂದು ರಾಹುಲ್ ಗಾಂಧಿ ಆರೋಪಿಸಿ ಟೀಕಾ ಪ್ರಹಾರ ನಡೆಸಿದ್ದಾರೆ. ಇದರ ವಿರುದ್ಧ ಬಿಜೆಪಿ ಮುಗಿಬಿದ್ದಿದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಕರೆ ಬಂದಿತು. 'ನರೇಂದರ್, ಸರೆಂಡರ್' (ಮೋದಿ ಶರಣಾಗತಿ) ಎಂದು ಆದೇಶಿಸಿದರು. ಅದಕ್ಕೆ ನರೇಂದ್ರ ಮೋದಿ 'ಒಕೆ ಸರ್' ಎಂದರು. ಅಲ್ಲಿಗೆ ಆಪರೇಷನ್ ಕಾರ್ಯಾಚರಣೆ ಮುಗಿಯಿತು" ಎಂದು ಗೇಲಿ ಮಾಡಿದ್ದರು. "ಇದು ಬಿಜೆಪಿ ಮತ್ತು ಆರ್ಎಸ್ಎಸ್ನ ಇತಿಹಾಸ. ಅವರಿಗೆ ಯಾರಾದರೂ ಸ್ವಲ್ಪ ಒತ್ತಡ ಹಾಕಿದರೆ ತಲೆಬಾಗುತ್ತಾರೆ. ಆದರೆ, ಕಾಂಗ್ರೆಸ್ ಹಾಗಲ್ಲ. ನಮ್ಮ ಸಿಂಹ, ಸಿಂಹಿಣಿಯರು ಸೂಪರ್ ಪವರ್ಗಳ ವಿರುದ್ಧ ಹೋರಾಡುತ್ತಾರೆ. ಎಂದಿಗೂ ತಲೆ ಬಾಗುವುದಿಲ್ಲ" ಎಂದು ಹೇಳಿದ್ದಾರೆ.
ವಿಪಕ್ಷ ನಾಯಕನ ಈ ಆರೋಪಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ರಾಹುಲ್ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಪೇಯ್ಡ್ ಏಜೆಂಟರಂತೆ ಮಾತನಾಡುತ್ತಿದ್ದಾರೆ. ಭಾರತೀಯ ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಕಾಂಗ್ರೆಸ್ ನಾಯಕ ಪಾಕಿಸ್ತಾನದ ಸೇನಾ ಮುಖ್ಯಸ್ಥ, ಅದರ ಪ್ರಧಾನಿ ಮತ್ತು ಭಯೋತ್ಪಾದಕರನ್ನೂ ಮೀರಿಸಿ ನೆರೆಯ ದೇಶವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅವರ ಅಣಕಗಳು ಅನಾರೋಗ್ಯಕರ ಮತ್ತು ಅಪಾಯಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದರು.