image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದ ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜ್ಞಾನಶೇಖರನ್​ ತಪ್ಪಿತಸ್ಥ ಎಂದ ಹೈ ಕೋರ್ಟ್​

ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದ ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜ್ಞಾನಶೇಖರನ್​ ತಪ್ಪಿತಸ್ಥ ಎಂದ ಹೈ ಕೋರ್ಟ್​

ತಮಿಳುನಾಡು : ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಜ್ಞಾನಶೇಖರನ್ ದೋಷಿ ಎಂದು ಚೆನ್ನೈ ಮಹಿಳಾ ನ್ಯಾಯಾಲಯ ತೀರ್ಪು ನೀಡಿದೆ. ಜೂನ್ 2ಕ್ಕೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದೆ. 2024 ರ ಡಿಸೆಂಬರ್ 23 ರಂದು ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜಲಕ್ಷ್ಮೀ ಅವರು ಜ್ಞಾನಶೇಖರನ್ ತಪ್ಪಿತಸ್ಥ ಎಂದು ಘೋಷಿಸಿದರು. ರಾಜಕೀಯವಾಗಿ ಭಾರೀ ಸದ್ದು ಮಾಡಿದ್ದ ಪ್ರಕರಣದಲ್ಲಿ, ಘಟನೆ ನಡೆದ 5 ತಿಂಗಳಲ್ಲಿ ತೀರ್ಪು ಹೊರಬಿದ್ದಿದೆ.

ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣವು ತಮಿಳುನಾಡಿನಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಸಂತ್ರಸ್ತ ವಿದ್ಯಾರ್ಥಿನಿ ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್​ ಸಿಗ್ನಲ್‌ಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿ ಜ್ಞಾನಶೇಖರನ್ ಅವರನ್ನು ಡಿಸೆಂಬರ್ 26 ರಂದು ಬಂಧಿಸಿದ್ದರು.

ಘಟನೆ ನಡೆದ ದಿನ ಅಣ್ಣಾ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ್ದು ಜ್ಞಾನಶೇಖರನ್​ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೆಳಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದ ಎಂದು ಪೊಲೀಸರು ಚಾರ್ಜ್​ ಶೀಟ್​ನಲ್ಲಿ ಆರೋಪಿಸಿದ್ದರು. ತಮಿಳುನಾಡು ಸರ್ಕಾರವು ಜ್ಞಾನಶೇಖರನ್ ವಿಚಾರಣೆ ನಡೆಸಲು 3 ಮಹಿಳಾ ಐಪಿಎಸ್ ಅಧಿಕಾರಿಗಳ ತಂಡವನ್ನು ರಚಿಸಿತ್ತು. ತನಿಖಾ ತಂಡವು ವಿಚಾರಣೆ ನಡೆಸಿ ಚೆನ್ನೈ ಮಹಿಳಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, 29 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿತು. ಅಲ್ಲದೇ, ತನಿಖಾ ತಂಡವು, ಸಿಸಿಟಿವಿ ಸಾಕ್ಷ್ಯಗಳು ಮತ್ತು ಮೊಬೈಲ್​ ಧ್ವನಿ ರೆಕಾರ್ಡಿಂಗ್‌ ಕ್ಲಿಪ್​ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಇದೆಲ್ಲವನ್ನೂ ಪರಿಗಣಿಸಿದ ಕೋರ್ಟ್ ಜ್ಞಾನಶೇಖರನ್​ ದೋಷಿ ಎಂದು ಘೋಷಿಸಿದೆ. ದೋಷಿ ಜ್ಞಾನಶೇಖರನ್​ ಆಡಳಿತಾರೂಢ ಡಿಎಂಕೆ ಪಕ್ಷದ ಸದಸ್ಯ ಎಂಬುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಡಿಎಂಕೆ ವಿರುದ್ಧ ಮುಗಿಬಿದ್ದಿದ್ದವು. ಆದರೆ, ಇದನ್ನು ನಿರಾಕರಿಸಿದ್ದ ಡಿಎಂಕೆ, ಆತ ಪಕ್ಷದ ಬೆಂಬಲಿಗನೇ ಹೊರತು ಸದಸ್ಯನಲ್ಲ ಎಂದು ಸ್ಪಷ್ಟನೆ ನೀಡಿತ್ತು. ಜ್ಞಾನಶೇಖರನ್​ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.

Category
ಕರಾವಳಿ ತರಂಗಿಣಿ