ನವದೆಹಲಿ: ಆಪರೇಷನ್ ಸಿಂಧೂರ ಬಳಿಕ ಪಂಜಾಬ್ನ ಗಡಿಯ ಮೂರೂ ಚೆಕ್ಪೋಸ್ಟ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ಬೀಟಿಂಗ್ ರಿಟ್ರೀಟ್ (ಕವಾಯತ್) ಇಂದಿನಿಂದ ಆರಂಭವಾಗಲಿದೆ ಎಂದು ಬಿಎಸ್ಎಫ್ ಘೋಷಿಸಿದೆ. ಅಟ್ಟಾರಿ - ವಾಘಾ, ಹುಸೇನಿವಾಲಾ ಮತ್ತು ಸದ್ಕಿ ಜಂಟಿ ಚೆಕ್ ಪೋಸ್ಟ್ಗಳಲ್ಲಿ ಧ್ವಜ ಇಳಿಸುವ ಕಾರ್ಯಕ್ರಮವೇ ಈ ಬೀಟಿಂಗ್ ರಿಟ್ರೀಟ್ ಆಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಮೇ 9 ರಂದು ಸಂಜೆ 6 ರಿಂದ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಈ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಪುನಾರಂಭಗೊಳ್ಳಲಿದೆ. ಬುಧವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಈ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಿಸ್ತು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸಲಾಗುವುದು. ಗೊತ್ತುಪಡಿಸಿದ ಗಡಿಯಲ್ಲಿ ಬಿಎಸ್ಎಫ್ ಮತ್ತು ಪಾಕಿಸ್ತಾನಿ ಸೇನೆ ಮುಖಾಮುಖಿಯಾಗಿ ಈ ಕವಾಯತು ನಡೆಸುತ್ತದೆ. ಈ ಕಾರ್ಯಕ್ರಮ ಪ್ರಮುಖವಾಗಿ ಮೂರು ಗಡಿ ಸ್ಥಳದಲ್ಲಿ ನಡೆಯುತ್ತದೆ. ಅಮೃತ್ಸರದ ಅಟ್ಟಾರಿ Atul, ಫಿರೋಜ್ಪುರ್ನ ಹುಸೇನಿವಾಲಾ ಮತ್ತು ಫಾಜಿಲ್ಕಾ ಜಿಲ್ಲೆಯ ಸದ್ಕಿಯಲ್ಲಿ ಸಾಗುತ್ತದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುವ ಧ್ವಜಗಳನ್ನು ಇಳಿಸುವ ಕಾರ್ಯಕ್ರಮ ಹಾಗೂ ಕವಾಯತುಗಳನ್ನು ವೀಕ್ಷಿಸಲು ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಮತ್ತು ಪ್ರವಾಸಿಗರು ಸೇರುತ್ತಾರೆ. ಈ ಕವಾಯತು ಪುನರ್ ಆರಂಭವಾಗುತ್ತಿರುವ ಹಿನ್ನೆಲೆ ಪ್ರವಾಸಿಗರನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲ ಭದ್ರತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಭದ್ರತಾ ಕಾಳಜಿಗಳು ಮತ್ತು ಸಾಂಕ್ರಾಮಿಕ ರೋಗ ಸಂಬಂಧಿತ ನಿರ್ಬಂಧಗಳಿಂದಾಗಿ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.