image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಬ್​ ಸ್ಫೋಟ​ ನಡೆಸಲು ಮುಂದಾಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು...

ಬಾಂಬ್​ ಸ್ಫೋಟ​ ನಡೆಸಲು ಮುಂದಾಗಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು...

ಹೈದರಾಬಾದ್​: ಬಾಂಬ್​ ಸ್ಫೋಟ​ ನಡೆಸಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು, ಪ್ರಮುಖ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂ ರಾಜ್ಯಗಳ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಆಂಧ್ರಪ್ರದೇಶದ ವಿಜಯನಗರದ ಸಿರಾಜ್-ಉರ್ ರೆಹಮಾನ್ (29) ಮತ್ತು ಸಿಕಂದರಾಬಾದ್‌ನ ಬೋಹಿಗುಡ ನಿವಾಸಿ ಸಯೀದ್ ಸಮೀರ್ (28) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಸಿರಾಜ್ ಎಂಜಿನಿಯರಿಂಗ್ ಪದವೀಧರನಾಗಿದ್ದರೆ, ಸಮೀರ್​ ಲಿಫ್ಟ್​ ಆಪರೇಟರ್​ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಿಜಯನಗರಂನ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದ್ದು, ಬಳಿಕ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಇಬ್ಬರು ಶಂಕಿತರು, ತಮ್ಮ ಕೃತ್ಯ ಎಸಗಲು ಅಲ್-ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ (ಎಹೆಚ್​ಐಎಂ) ಎಂಬ ಹೆಸರಿನ ಗುಂಪನ್ನು ರಚಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ, ವಿಜಯನಗರಂ ಬಳಿ ಬಾಂಬ್​​ ಸ್ಪೋಟ ನಡೆಸಲು ಇವರು ತಯಾರಿ ನಡೆಸಿದ್ದರು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಿದ್ದರು. ಈ ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಸೌದಿ ಅರೇಬಿಯಾದ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದು, ಆತ ಐಎಸ್​ಐಎಸ್​​ ಶಂಕಿತನಾಗಿದ್ದಾನೆ. ಆತನೇ ಇಬ್ಬರಿಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಬಂಧಿತರಿಬ್ಬರೂ ಸ್ಪೋಟಕಗಳನ್ನು ಆನ್​ಲೈನ್​ನಲ್ಲಿ ಖರೀದಿ ಮಾಡುವ ಜೊತೆಗೆ, ಅದರ ಕಾರ್ಯಾಚರಣೆಯ ಮಾಹಿತಿಯನ್ನು ಕೂಡ ಆನ್​ಲೈನ್​ನಲ್ಲೇ ಪಡೆದಿದ್ದರು. ಮೇ21 ಮತ್ತು 22ರಂದು ಅವರು ವಿಜಯನಗರಂನ ಹೊರವಲಯದಲ್ಲಿ ಈ ಸ್ಪೋಟ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿ ಪಡೆದ ಎರಡು ರಾಜ್ಯದ ಪೊಲೀಸರು ಇಬ್ಬರನ್ನು ಬಂಧಿಸುವ ಮೂಲಕ ಇವರ ಸಂಚನ್ನು ವಿಫಲಗೊಳಿಸಿದ್ದಾರೆ. ಈ ಶಂಕಿತರು ಕೆಲವು ಯುವಕರನ್ನು ಭೇಟಿಯಾಗಿರುವುದು ತಿಳಿದು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಿರಾಜ್​ ಹೈದರಾಬಾದ್​​ಗೆ ಗ್ರೂಪ್​2 ಪರೀಕ್ಷೆ ಸಿದ್ಧತೆಗೆ ಬಂದಿದ್ದು, ಅಲ್ಲಿಯೇ ನೆಲೆಸಿದ್ದ. ಕೆಲವು ಬಾರಿ ಸಮೀರ್​ನನ್ನು ಭೇಟಿಯಾಗಿದ್ದಾನೆ. ಇದಾದ ಬಳಿಕ, ಸಿರಾಜ್​ ವಿಜಯನಗರಂಗೆ ಪರೀಕ್ಷೆ ಬರೆಯಲು ಆಗಮಿಸಿದ್ದು, ಈ ವೇಳೆ ವಿಜಯನಗರಂ ವಿಳಾಸಕ್ಕೆ ಕೆಲವು ಸ್ಪೋಟಕಗಳನ್ನು ಆರ್ಡರ್​ ಮಾಡಿದ್ದ.

Category
ಕರಾವಳಿ ತರಂಗಿಣಿ