ಮಾಲ್ಡೀವ್ಸ್ : ಅಧ್ಯಕ್ಷ ಮೊಹಮದ್ ಮುಯಿಜು ಅಸಹಕಾರ ನೀತಿ ಅನುಸರಿಸುತ್ತಿದ್ದರೂ, ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್ಗೆ ಭಾರತ ಆರ್ಥಿಕ ಬೆಂಬಲ ಘೋಷಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ 50 ಮಿಲಿಯನ್ ಡಾಲರ್ ಬಡ್ಡಿರಹಿತ ಅನುದಾನ ಬಿಡುಗಡೆ ಮಾಡಿದೆ. ಮಾಲ್ಡೀವ್ಸ್ ಸರ್ಕಾರದ ಕೋರಿಕೆಯ ಮೇರೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್ಬಿಐ) ಮಾಲ್ಡೀವ್ಸ್ನ ಹಣಕಾಸು ಸಚಿವಾಲಯಕ್ಕೆ 50 ಮಿಲಿಯನ್ ಡಾಲರ್ ಅನುದಾನವನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ ಎಂದು ಅಲ್ಲಿನ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
"ಮಾರ್ಚ್ 2019ರಿಂದ ಭಾರತ ಸರ್ಕಾರವು ಎಸ್ಬಿಐನಿಂದ ಇಂತಹ ಆರ್ಥಿಕ ನೆರವು ನೀಡುತ್ತಿದೆ. ಮಾಲ್ಡೀವ್ಸ್ ಸರ್ಕಾರಕ್ಕೆ ನೀಡಲಾಗುವ ವಾರ್ಷಿಕ ಅನುದಾನವು ಬಡ್ಡಿರಹಿತವಾಗಿರುತ್ತದೆ. ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ ನೀಡುವ ತುರ್ತು ಹಣಕಾಸು ಸಹಾಯ ಇದಾಗಿದೆ. ಸರ್ಕಾರಗಳ ನಡುವಿನ ವಿಶಿಷ್ಟ ವ್ಯವಸ್ಥೆಯಡಿ ಈ ಸಾಲ ಮಂಜೂರು ಮಾಡಲಾಗುತ್ತದೆ" ಎಂದು ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.
ಮಾಲ್ಡೀವ್ಸ್ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರ. ದೇಶ ಅನುಸರಿಸುವ 'ನೆರೆಹೊರೆ ಮೊದಲು' ಎಂಬ ನೀತಿಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಅದರ ಅಗತ್ಯದ ಸಮಯದಲ್ಲಿ ಭಾರತವು ಸಹಾಯ ಮಾಡಿದೆ. ಇದರ ಜೊತೆಗೆ, ಈ ವರ್ಷದ ಆರಂಭದಲ್ಲಿ ಅಗತ್ಯ ವಸ್ತುಗಳ ರಫ್ತಿಗೆ ವಿಶೇಷ ಮೀಸಲಾತಿ ವಿಸ್ತರಿಸಲಾಗಿದೆ. ಮಾಲ್ಡೀವ್ಸ್ ಸರ್ಕಾರ ಮತ್ತು ಜನರಿಗೆ ಭಾರತದ ನಿರಂತರ ಬೆಂಬಲವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ಆರ್ಥಿಕ ನೆರವಿಗೆ ಮಾಲ್ಡೀವ್ಸ್ನ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. "ತಮ್ಮ ದೇಶಕ್ಕೆ ಅಗತ್ಯದ ಸಂದರ್ಭದಲ್ಲಿ ಹಣಕಾಸಿನ ಬೆಂಬಲವನ್ನು ನೀಡಿದ್ದಕ್ಕಾಗಿ ಭಾರತ ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.