ಜಮ್ಮು ಮತ್ತು ಕಾಶ್ಮೀರ: ಮೇ 8-9ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುತ್ತಿದ್ದ ಏಳು ಭಯೋತ್ಪಾದಕರನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಕೊಂದು ಹಾಕಿದೆ. ಈ ಮೂಲಕ ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಪಾಕಿಸ್ತಾನ ಪೋಸ್ಟ್ ಧಂಧರ್ಗೆ ವ್ಯಾಪಕ ಹಾನಿಯಾಗಿದೆ ಎಂದು ಬಿಎಸ್ಎಫ್ ಹೇಳಿದೆ.
ಪಾಕಿಸ್ತಾನ ರೇಂಜರ್ಗಳ ಗುಂಡಿನ ದಾಳಿಯ ಸಹಾಯದಿಂದ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಭಾರತದ ಭಾಗಕ್ಕೆ ನುಸುಳಲು ಪ್ರಯತ್ನಿಸಿದೆ ಎಂದು ಬಿಎಸ್ಎಫ್ ತಿಳಿಸಿದೆ. ಮಧ್ಯರಾತ್ರಿ ಬಿಎಸ್ಎಫ್ನ ಸಾಂಬಾ ಸೆಕ್ಟರ್ನಲ್ಲಿ, ದೊಡ್ಡ ಗುಂಪಿನ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
"ಈ ಒಳನುಸುಳುವಿಕೆ ಪ್ರಯತ್ನಕ್ಕೆ ಪಾಕ್ ರೇಂಜರ್ಸ್ ಪೋಸ್ಟ್ ಧಂಧರ್ನಿಂದ ಗುಂಡಿನ ದಾಳಿ ಬೆಂಬಲ ನೀಡಿತು. ಬಿಎಸ್ಎಫ್ನ ಎಚ್ಚರದಿಂದಿದ್ದ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ತಟಸ್ಥಗೊಳಿಸಿದವು. ನಮ್ಮ ಪಡೆ ಕನಿಷ್ಠ 7 ಭಯೋತ್ಪಾದಕರನ್ನು ಕೊಂದು ಪಾಕಿಸ್ತಾನಿ ಪೋಸ್ಟ್ ಧಂಧರ್ಗೆ ವ್ಯಾಪಕ ಹಾನಿಯನ್ನುಂಟು ಮಾಡಿದವು" ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಧಂಧರ್ನಲ್ಲಿ ಬಿಎಂಜಿ ಬಂಕರ್ ಅನ್ನು ಬಿಎಸ್ಎಫ್ ನಾಶಪಡಿಸಿದೆ.
"ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ಉದ್ವಿಗ್ನತೆಯ ಲಾಭ ಪಡೆದುಕೊಂಡು, ಭಯೋತ್ಪಾದಕ ಸಂಘಟನೆಗಳು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿವೆ. ಆದ್ದರಿಂದ, ನಾವು ಪಶ್ಚಿಮ ಗಡಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದೇವೆ" ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಬಿಎಸ್ಎಫ್ ಗುಪ್ತಚರ ವಿಭಾಗದ ನಿರ್ದಿಷ್ಟ ಮಾಹಿತಿಯ ಮೇರೆಗೆ, ಈ ನುಸುಳುಕೋರ ಭಯೋತ್ಪಾದಕರಿಂದ 25 ಗ್ರಾಂ ಹೆರಾಯಿನ್, ಒಂದು ಪಿಸ್ತೂಲ್ ಜೊತೆಗೆ ಮ್ಯಾಗಜೀನ್ ಮತ್ತು 4 ಜೀವಂತ ಗುಂಡುಗಳು, 4 ಸ್ಮಾರ್ಟ್ಫೋನ್ಗಳು, ಒಂದು ಮೋಟಾರ್ ಸೈಕಲ್ ಮತ್ತು ಒಂದು ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡಿವೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.