ಛತ್ತೀಸ್ಗಢ: ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ 15ಕ್ಕೂ ಹೆಚ್ಚು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿರುವ ಬಿಜಾಪುರ ಜಿಲ್ಲೆಯ ಕರೆಗುಟ್ಟ ಬೆಟ್ಟ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಈವರೆಗೆ 15ಕ್ಕೂ ಹೆಚ್ಚು ನಕ್ಸಲರು ಹತರಾಗಿದ್ದಾರೆ ಮತ್ತು ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್ತಾರ್ ಪ್ರದೇಶದಲ್ಲಿ ನಡೆಯುತ್ತಿರುವ ಆಪರೇಷನ್ ಸಂಕಲ್ಪ ಕಾರ್ಯಾಚರಣೆಯಲ್ಲಿ, ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (ಎಸ್ಟಿಎಫ್), ರಾಜ್ಯ ಪೊಲೀಸರ ಎಲ್ಲಾ ಘಟಕಗಳು, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಕೋಬ್ರಾ ಪಡೆ ಸೇರಿದಂತೆ ವಿವಿಧ ಘಟಕಗಳಿಗೆ ಸೇರಿದ ಸುಮಾರು 24,000 ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆ.
ಮಾವೋವಾದಿಗಳ ಪ್ರಬಲ ಮಿಲಿಟರಿಯ ಬೆಟಾಲಿಯನ್ ಸಂಖ್ಯೆ 1ರ ಹಿರಿಯ ನಕ್ಸಲರು ಮತ್ತು ತೆಲಂಗಾಣ ರಾಜ್ಯ ಸಮಿತಿಯ ಮಾವೋವಾದಿಗಳ ಉಪಸ್ಥಿತಿ ಕರೆಗುಟ್ಟ ಬೆಟ್ಟ ಅರಣ್ಯದಲ್ಲಿರುವ ಬಗ್ಗೆ ಮಾಹಿತಿ ಆಧರಿಸಿ, ಏಪ್ರಿಲ್ 21ರಂದು ಸಂಕಲ್ಪ ಹೆಸರಿನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.