ಬೀಜಿಂಗ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಬಂಧ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿರುವ ಚೀನಾ, ತ್ವರಿತ ಹಾಗೂ ನ್ಯಾಯಯುತ ತನಿಖೆ ನಡೆಯಬೇಕು ಎಂದು ಭಾರತವನ್ನು ಆಗ್ರಹಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಚೀನಾ ಬೆಂಬಲ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದರ್ ಅವರೊಂದಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಗ್ರರ ದಾಳಿ ಬೆನ್ನಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿ ಪಾಲಿಟಿಕಲ್ ಬ್ಯೂರೋದ ಸದಸ್ಯರೂ ಆಗಿರುವ ವಾಂಗ್ ಅವರಿಗೆ ಇಶಾಕ್ ದರ್ ವಿವರಣೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಎಲ್ಲ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಭಯೋತ್ಪಾದನೆ ಎದುರಿಸುವುದು ಇಡೀ ಜಗತ್ತಿನ ಸಮಾನ ಜವಾಬ್ದಾರಿಯಾಗಿದೆ. ಪಾಕ್ನ ಈ ಪ್ರಯತ್ನಗಳಿಗೆ ಬೀಜಿಂಗ್ನ ನಿರಂತರ ಬೆಂಬಲವನ್ನು ವಾಂಗ್ ಪುನರುಚ್ಚರಿಸಿದ್ದಾರೆ.
ಮಿತ್ರ ರಾಷ್ಟ್ರ ಹಾಗೂ ಕಾರ್ಯತಂತ್ರದ ಪಾಲುದಾರ ಪಾಕಿಸ್ತಾನದ ಭದ್ರತಾ ಕಳವಳವನ್ನು ಚೀನಾ ಸಂಪೂರ್ಣವಾಗಿ ಅರ್ಥೈಸಿಕೊಂಡಿದೆ. ಅಲ್ಲದೆ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂದು ಅದು ಹೇಳಿದೆ.
ಎರಡೂ ಕಡೆಯವರು ಸಂಯಮ ಪಾಲಿಸುವಂತೆಯೂ, ಪರಿಸ್ಥಿತಿ ಸಂಘರ್ಷದತ್ತ ಹೋಗದಂತೆ ನೋಡಿಕೊಂಡು ಬಿಕ್ಕಟ್ಟು ಬಗೆಹರಿಸುವ ನಂಬಿಕೆಯನ್ನು ವ್ಯಕ್ತಪಡಿಸಿದೆ.
ಈ ಮೊದಲು ಕಾಶ್ಮೀರದ ಪಹಲ್ಕಾಮ್ನಲ್ಲಿ ನಡೆದ ಉಗ್ರರ ದಾಳಿ ಕುರಿತು ತನಿಖೆ ನಡೆಸುವ ತಂಡದಲ್ಲಿ ರಷ್ಯಾ ಹಾಗೂ ಚೀನಾ ಪ್ರತಿನಿಧಿಗಳೂ ಇರಬೇಕು ಎಂದು ಪಾಕಿಸ್ತಾನ ಹೇಳಿತ್ತು.