ರಾಂಬನ್: ದೇಶಕ್ಕೆ ಸಂಪರ್ಕ ಕಲ್ಪಿಸುವ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಸಾಗಿದ್ದು, ಏಕಮುಖ ಸಂಚಾರಕ್ಕೆ ಇದೀಗ ಅವಕಾಶ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಏಪ್ರಿಲ್ 20ರಂದು ಉಂಟಾದ ಮೇಘಸ್ಫೋಟದ ಪರಿಣಾಮ ಭಾರೀ ಮಳೆ- ಭೂ ಕುಸಿತದಿಂದ ರಾಜ್ಯದ ಪ್ರಮುಖ ರಸ್ತೆ ಸಂಚಾರ ಮಾರ್ಗ ಸಂಪರ್ಕ ಕಡಿತಗೊಂಡಿತ್ತು. ಇದೀಗ ಈ ಪ್ರವಾಸಿ ಮಾರ್ಗದ ದುರಸ್ತಿ ಕಾರ್ಯ ಸಾಗಿದ್ದು, ಅಧಿಕಾರಿಗಳು ಜಮ್ಮುವಿನಿಂದ ಶ್ರೀನಗರಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಕಣಿವೆ ನಾಡಿನಿಂದ ದೇಶದ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದಾಗಿದ್ದು, ಬಂದ್ ಆಗಿದೆ. ನೂರಾರು ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ. 250 ಕಿ.ಮೀ ಉದ್ದದ ಜಮ್ಮು- ಶ್ರೀನಗರ ಹೆದ್ದಾರಿಯನ್ನು ದುರಸ್ತಿಗೊಳಿಸಿ, ಪುನರ್ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇಂದು ರಾಂಬನ್ಗೆ ಭೇಟಿ ನೀಡಲಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ಧುಲ್ಲಾ, ಹೆದ್ದಾರಿ ಮತ್ತು ಇತರ ಮೂಲಸೌಕರ್ಯಗಳ ಸಂಪೂರ್ಣ ಪುನರ್ ಸ್ಥಾಪನೆ ಕಾರ್ಯದ ಪ್ರಗತಿಯನ್ನು ಪರಿಶೀಲನೆ ನಡೆಸಲಿದ್ದಾರೆ.
ಸಂಪೂರ್ಣ ಅವಶೇಷಗಳಿಂದ ಮುಳುಗಿ ಹೋಗಿದ್ದ ರಸ್ತೆಯನ್ನು ಇದೀಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ರಸ್ತೆ ಮಾರ್ಗ ಬಂದ್ ಆಗಿದ್ದ ಪರಿಣಾಮ ಅನೇಕ ವಾಹನಗಳು ಬೇರೆ ಮಾರ್ಗದ ಪರ್ಯಾಯ ಸಂಪರ್ಕವಿಲ್ಲದೇ ಸಂಚಾರ ಸ್ಥಗಿತಗೊಳಿಸಿದ್ದವು. ಎನ್ಹೆಚ್ 44 ಸಂಚಾರ ಬಂದ್ ಮಾಡಿ, ರಸ್ತೆ ಮೇಲೆ ಬಿದ್ದಿರುವ ಅವಶೇಷಗಳ ತೆಗೆದು ಹಾಕುವ ಪ್ರಯತ್ನ ಸಾಗಿದ್ದು, ನೆಲದಡಿ ಮರಳು ಮತ್ತು ಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವುಗಳ ತೆರವು ಸವಾಲಾಗಿತ್ತು.
ಈ ಸ್ಥಳದಲ್ಲಿ ಉಂಟಾದ ತೀವ್ರ ಹಾನಿಯಿಂದಾಗಿ ಸಾವಿರಾರು ಪ್ರಯಾಣಿಕರು ಕೂಡ ಅನೇಕ ಸ್ಥಳದಲ್ಲಿ ಸಿಲುಕುವಂತೆ ಆಗಿತ್ತು. ಪ್ರಮುಖ ಸಂಚಾರ ಹೆದ್ದಾರಿ ಮಾರ್ಗ ಬಂದ್ ಆದ ಪರಿಣಾಮ ಪ್ರವಾಸ ಸೇರಿದಂತೆ ಸರಕು- ಸಾಗಣೆಯಲ್ಲಿ ಕೂಡ ತೀವ್ರ ತೊಂದರೆ ಉಂಟಾಗಿದೆ. ಇದೀಗ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರವಾಸಿಗರು ಹೈರಾಣಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ವಾಹನಗಳ ಸಂಚಾರವನ್ನು ಹಂತ ಹಂತವಾಗಿ ನಿರ್ವಹಿಸುತ್ತಿದ್ದರಿಂದ ಟ್ರಾಫಿಕ್ ದಟ್ಟಣೆ ಸಮಸ್ಯೆಯಾಗಿದೆ. ಶೀಘ್ರದಲ್ಲೇ ದುರಸ್ತಿ ಕಾರ್ಯ ಪೂರ್ಣಗೊಳಿಸಿ, ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.