ಉದಾಂಪುರ್: ಜಮ್ಮು ಮತ್ತು ಕಾಶ್ಮೀರದ ಉದಾಂಪುರ್ನಲ್ಲಿ ಗುರುವಾರ ಬೆಳಗ್ಗೆಯಿಂದ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಈ ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿದೆ.
ಉದಾಂಪುರ ಪ್ರದೇಶದ ದುಡು ಬಸಂತ್ಗಢ್ನಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ಆರಂಭವಾಗಿದೆ. ಇಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇದರ ಆಧಾರದ ಮೇಲೆ ಈ ಕಾರ್ಯಾಚರಣೆ ಸಾಗಿತು. ಆರಂಭದ ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕರು ಗಂಭೀರವಾಗಿ ಗಾಯಗೊಂಡರು. ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಹುತಾತ್ಮರಾಗಿದ್ದರು.
ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಲಸಾನಾ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆ ಕಾರ್ಯಾಚರಣೆ ಸಾಗಿದೆ. ಕಳೆದ 10 ದಿನಗಳಿಂದ ಇಲ್ಲಿ ಭಾರತೀಯ ಸೇನೆಯ ರೋಮಿಯೋ ಪಡೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದು, ಇಂದು ಕೂಡ ಮುಂದುವರೆದಿದೆ.
ಪೂಂಚ್ಗೆ ಜಮ್ಮುವಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಸಾನಾ ಗ್ರಾಮದ ಬಳಿ ನಡೆದ ಕಾರ್ಯಾಚರಣೆಯಲ್ಲಿ ರೋಮಿಯೋ ಫೋರ್ಸ್ ಸಿಬ್ಬಂದಿ ಗುಂಡಿನ ಗಾಯಕ್ಕೆ ಒಳಗಾಗಿದ್ದಾರೆ.
ಪಹಲ್ಗಾಮ್ ದಾಳಿ ಬೆನ್ನಲ್ಲೇ ಜಮ್ಮು - ರಜೌರಿ- ಪೂಂಚ್ನ ರಾಷ್ಟ್ರೀಯ ಹೆದ್ದಾರಿ 144ರಲ್ಲಿ ಭದ್ರತಾ ಪಡೆ ಬಿಗಿ ಭದ್ರತೆ ನಡೆಸಿದೆ. ಸ್ಥಳೀಯ ವಾಹನ ಮತ್ತು ಲೈಸೆನ್ಸ್ ಪರೀಕ್ಷೆ ನಡೆಸಲಾಗುತ್ತಿದೆ. ಲೋಡೆಡ್ ಟ್ರಕ್ಗಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದು, ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ನಿರ್ವಹಣೆಗೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದು ಅವರಿಗೆ ಸೇನೆ ಕೂಡ ನೆರವು ನೀಡಿದೆ.