image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತತ್ತರಿಸಿರುವ ಜನ ನದಿ ದಾಟಿ ಪಲಾಯನ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತತ್ತರಿಸಿರುವ ಜನ ನದಿ ದಾಟಿ ಪಲಾಯನ

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರದಿಂದ ಬಾಧಿತರಾದ ನೂರಾರು ಜನ ಭಾಗೀರಥಿ ನದಿಯನ್ನು ದಾಟಿ ಪಕ್ಕದ ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುರ್ಷಿದಾಬಾದ್​ನಿಂದ ಬಂದು ಆಶ್ರಯ ಪಡೆದಿರುವ ಕುಟುಂಬಗಳಿಗೆ ಸ್ಥಳೀಯಾಡಳಿತವು ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದೆ ಹಾಗೂ ಶಾಲೆಗಳಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ. ಅಲ್ಲದೆ, ದೋಣಿಗಳ ಮೂಲಕ ಬರುತ್ತಿರುವವರಿಗೆ ಸಹಾಯ ಮಾಡಲು ನದಿ ತೀರದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ಸುತಿ, ಧುಲಿಯನ್, ಜಂಗಿಪುರ ಮತ್ತು ಶಂಶೇರ್ ಗಂಜ್ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್​ನ ಹಲವಾರು ಪ್ರದೇಶಗಳಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಮುರ್ಷಿದಾಬಾದ್​ನ ಈ ಭಾಗಗಳಲ್ಲಿ ಅಂಗಡಿಗಳು, ಹೋಟೆಲ್​ಗಳು ಮತ್ತು ಮನೆಗಳನ್ನು ಸುಟ್ಟುಹಾಕಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ.

"ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಮತ್ತು ಹೊರಗಿನವರು ಹಾಗೂ ಕೆಲ ಸ್ಥಳೀಯರ ಗುಂಪುಗಳು ಮಹಿಳೆಯರು ಮತ್ತು ಯುವತಿಯರಿಗೆ ಕಿರುಕುಳ ನೀಡಿದ್ದರಿಂದ ನಾವು ಧುಲಿಯನ್​ನ ಮಂದಿರ್ ಪಾರಾ ಪ್ರದೇಶದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿದ್ದೇವೆ" ಎಂದು ನಾಲ್ಕು ಜನ ಕುಟುಂಬ ಸದಸ್ಯರೊಂದಿಗೆ ಅಲ್ಲಿಂದ ಪಲಾಯನಗೈದ ಸಂತ್ರಸ್ತ ಯುವತಿ ಸುದ್ದಿಗಾರರಿಗೆ ತಿಳಿಸಿದರು.

"ಅವರು ನಮ್ಮತ್ತ ಬಾಂಬ್ ಎಸೆದರು, ವಕ್ಫ್ (ತಿದ್ದುಪಡಿ) ಕಾಯ್ದೆಗಾಗಿ ನಮ್ಮನ್ನು ದೂಷಿಸಿದರು ಮತ್ತು ತಕ್ಷಣವೇ ಮನೆಗಳನ್ನು ತೊರೆಯುವಂತೆ ಹೇಳಿದರು. ನಮ್ಮ ಕುಟುಂಬದ ಪುರುಷರನ್ನು ಅವರು ಥಳಿಸಿದರು. ನಮ್ಮ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತ ನಾವು ಕೇಂದ್ರ ಭದ್ರತಾ ಪಡೆಗಳ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡೆವು" ಎಂದು ಯುವತಿ ಹೇಳಿದರು.

ಈ ಬಗ್ಗೆ ಮಾತನಾಡಿದ ಮತ್ತೊಬ್ಬ ವೃದ್ಧ ಮಹಿಳೆ, "ನಾವು ಯಾವುದೇ ತಪ್ಪು ಮಾಡದಿದ್ದರೂ ಲೂಟಿಕೋರರ ಮುಂದೆ ಕೈಮುಗಿದು ಕ್ಷಮೆ ಕೋರಿದ್ದೇವೆ. ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರರು ನಮ್ಮ ಮೇಲೆ ದೌರ್ಜನ್ಯವೆಸಗಿದರು. ನಾನು, ನನ್ನ ಮಗ, ಸೊಸೆ ಮತ್ತು ಮೊಮ್ಮಗ ನಮ್ಮ ಕೆಲವು ವಸ್ತುಗಳೊಂದಿಗೆ ಓಡಿಹೋದೆವು. ಒಂದೊಮ್ಮೆ ನಾವು ಅಲ್ಲಿಯೇ ಇದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು." ಎಂದರು.

ಹಿಂಸಾಚಾರದ ನಂತರ 400 ಜನರು ಧುಲಿಯನ್ ನಿಂದ ಪಲಾಯನ ಮಾಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

"ಧಾರ್ಮಿಕ ಮತಾಂಧರ ಭಯದಿಂದ ಮುರ್ಷಿದಾಬಾದ್​ನ ಧುಲಿಯನ್​ನಿಂದ 400 ಕ್ಕೂ ಹೆಚ್ಚು ಹಿಂದೂಗಳು ನದಿಯನ್ನು ದಾಟಿ ಮಾಲ್ಡಾದ ಬೈಸ್ ನಾಬ್​ನಗರದ ಡಿಯೋನಾಪುರ-ಸೋವಾಪುರ ಜಿಪಿಯ ಪಾರ್ ಲಾಲ್ಪುರ್ ಹೈಸ್ಕೂಲ್​ನಲ್ಲಿ ಆಶ್ರಯ ಪಡೆದಿದ್ದಾರೆ. ಬಂಗಾಳದಲ್ಲಿ ಧಾರ್ಮಿಕ ಹಿಂಸಾಚಾರ ನಡೆಯುತ್ತಿರುವುದು ವಾಸ್ತವ" ಎಂದು ಸುವೇಂದು ಹೇಳಿದರು.

"ಟಿಎಂಸಿಯ ತುಷ್ಟೀಕರಣ ರಾಜಕೀಯವು ತೀವ್ರಗಾಮಿ ಶಕ್ತಿಗಳಿಗೆ ಧೈರ್ಯ ತುಂಬಿದೆ. ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ನಮ್ಮ ಜನ ತಮ್ಮ ಸ್ವಂತ ಭೂಮಿಯಲ್ಲಿಯೇ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಈ ಕುಸಿತಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸ್ಥಳಾಂತರಗೊಂಡ ಹಿಂದೂಗಳು ಸುರಕ್ಷಿತವಾಗಿ ಮರಳುವಂತೆ ಮತ್ತು ಈ ಜಿಹಾದಿ ಭಯೋತ್ಪಾದಕರಿಂದ ಅವರನ್ನು ರಕ್ಷಿಸಬೇಕೆಂದು ಜಿಲ್ಲೆಯಲ್ಲಿ ನಿಯೋಜಿಸಲಾದ ಕೇಂದ್ರ ಅರೆಸೈನಿಕ ಪಡೆಗಳು, ರಾಜ್ಯ ಪೊಲೀಸರು ಮತ್ತು ಜಿಲ್ಲಾಡಳಿತವನ್ನು ನಾನು ಒತ್ತಾಯಿಸುತ್ತೇನೆ. ಬಂಗಾಳ ಉರಿಯುತ್ತಿದೆ. ಸಾಮಾಜಿಕ ಚೌಕಟ್ಟು ಛಿದ್ರಗೊಂಡಿದೆ. ಇದು ಇಲ್ಲಿಗೆ ನಿಲ್ಲಬೇಕಿದೆ." ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ