image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಎಂ ನಿತೀಶ್ ​​ಕುಮಾರ್​ ಇಫ್ತಾರ್​ ಕೂಟಕ್ಕೆ ಬರುವುದಿಲ್ಲ ಎಂದ ಮುಸ್ಲಿಂ ಸಂಘಟನೆ

ಸಿಎಂ ನಿತೀಶ್ ​​ಕುಮಾರ್​ ಇಫ್ತಾರ್​ ಕೂಟಕ್ಕೆ ಬರುವುದಿಲ್ಲ ಎಂದ ಮುಸ್ಲಿಂ ಸಂಘಟನೆ

ಬಿಹಾರ : ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳೂ ಗರಿಗೆದರಿವೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರುವ ನಿರೀಕ್ಷೆಯಲ್ಲಿವೆ.

ಸದ್ಯ ರಂಜಾನ್​ ಆಚರಣೆ ನಡೆಯುತ್ತಿದೆ. ಸಿಎಂ ನಿತೀಶ್ ​​ಕುಮಾರ್​ ಇಫ್ತಾರ್​ ಕೂಟ ಆಯೋಜಿಸಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಮುಸ್ಲಿಂ ಸಂಘಟನೆಯೊಂದು ಘೋಷಿಸಿದೆ. ಇದಕ್ಕೆ ರಾಜಕೀಯ ಕಾರಣ ನೀಡಿದೆ.

ಇಂದು ಮುಖ್ಯಮಂತ್ರಿ ನಿವಾಸದಲ್ಲಿ ನಡೆಯುವ ಇಫ್ತಾರ್​ ಕೂಟದ ಆಹ್ವಾನವನ್ನು ತಿರಸ್ಕರಿಸಿದ್ದಾಗಿ ಇಮಾರತ್​ ಶರಿಯಾ ಹೇಳಿದೆ. ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ವಕ್ಫ್​​ ಮಸೂದೆಯನ್ನು ಜೆಡಿಯು ಬೆಂಬಲಿಸಿದ್ದರಿಂದ ಸಿಎಂ ಆಯೋಜಿಸಿರುವ ಕೂಟದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಅನುಯಾಯಿಗಳನ್ನು ಹೊಂದಿದ್ದಾಗಿ ಹೇಳಿಕೊಳ್ಳುವ ಸಂಘಟನೆ ತಿಳಿಸಿದೆ.

ಮುಸ್ಲಿಮರ ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಇನ್ನಷ್ಟು ಹದಗೆಡಿಸುವ ಬೆದರಿಕೆ ಹಾಕುವ ವಕ್ಫ್ ಮಸೂದೆಗೆ ನಿತೀಶ್ ​ಕುಮಾರ್​ ಬೆಂಬಲ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀವು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ, ಬಿಜೆಪಿಯೊಂದಿಗಿನ ಮೈತ್ರಿ ಮತ್ತು ಸಂವಿಧಾನಬಾಹಿರ ಮಸೂದೆಗೆ ಬೆಂಬಲ ನೀಡುವ ಮೂಲಕ ಬದ್ಧತೆಯ ವಿರುದ್ಧ ನಡೆದುಕೊಂಡಿದ್ದಾಗಿ ಶರಿಯಾ ಟೀಕಿಸಿದೆ.

ಈ ಇಫ್ತಾರ್​ ಕೂಟವು 'ಟೋಕನಿಸಂ' ಆಗಿದೆ. ಮುಸ್ಲಿಮರ ಬಗೆಗಿನ ನಿಮ್ಮ ಅಸಡ್ಡೆ ಮತ್ತು ಔಪಚಾರಿಕ ಕಾರ್ಯಮ್ರಮಗಳು ಅರ್ಥಹೀನ. ಮತಕ್ಕಾಗಿ ಮಾತ್ರ ನಮ್ಮ ಸಮುದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಂಘಟನೆ ಆರೋಪಿಸಿದೆ. ದೇಶಾದ್ಯಂತ "ಅವ್ಯಾಹತ"ವಾಗಿ, "ನಿಯಂತ್ರಣವಿಲ್ಲದೆ" ಆಸ್ತಿಯನ್ನು ಹೊಂದಿರುವ ವಕ್ಫ್​ ಮಂಡಳಿಗೆ ಕಾನೂನು ನಿಯಮಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ವಕ್ಫ್​ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ಇದಕ್ಕೆ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕೇಂದ್ರದ ಎನ್​ಡಿಎ ಸರ್ಕಾರದ ಭಾಗವಾಗಿರುವ ಸಿಎಂ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಮತ್ತು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಗಳು ಮಸೂದೆಯನ್ನು ಬೆಂಬಲಿಸಿವೆ.

Category
ಕರಾವಳಿ ತರಂಗಿಣಿ