ನವದೆಹಲಿ: ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದೊಯ್ದು ಆಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ಕ್ರೈಂ ಕೇಂದ್ರದಲ್ಲಿ ಕೆಲಸಕ್ಕಾಗಿ ಇರಿಸಿಕೊಂಡಿದ್ದ 266ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯದ ವಕ್ತಾರ ರಣ್ಧೀರ್ ಜೈಸ್ವಾಲ್, "ಐಎಎಫ್ ವಿಮಾನದಲ್ಲಿ 266 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ. ಇವರನ್ನೆಲ್ಲಾ ಆಗ್ನೇಯ ಏಷ್ಯಾ ದೇಶಗಳಲ್ಲಿನ ಸೈಬರ್ ಕ್ರೈಂ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ಸೋಮವಾರ ಇದೇ ರೀತಿ 283 ಭಾರತೀಯರನ್ನು ಕರೆತರಲಾಗಿತ್ತು. ಮಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರದ ಜೊತೆಗೆ ಭಾರತದ ರಾಯಭಾರ ಕಚೇರಿಗಳು ಭಾರತೀಯರ ಸುರಕ್ಷಿತ ಬಿಡುಗಡೆ ಹಾಗೂ ಅವರನ್ನು ಸ್ವದೇಶಕ್ಕೆ ಕರೆತರುವ ಕುರಿತು ಕೆಲಸ ಮಾಡುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 10ರಂದು ಕೂಡ ಈ ಕುರಿತು ತಿಳಿಸಿದ್ದ ವಿದೇಶಾಂಗ ಇಲಾಖೆ, ಮಯಾನ್ಮಾರ್ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ನಕಲಿ ಉದ್ಯೋಗದ ಆಮಿಷವೊಡ್ಡಿ ಕರೆದೊಯ್ದಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿ, ಕರೆತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದಿತ್ತು.
ಭಾರತದಿಂದ ನಕಲಿ ಉದ್ಯೋಗ ಆಮಿಷದ ನೆಪವೊಡ್ಡಿ ಕರೆದೊಯ್ದಿರುವ ಇವರನ್ನೆಲ್ಲಾ ಒತ್ತಾಯಪೂರ್ವಕವಾಗಿ ಮಯನ್ಮಾರ್-ಥೈಲ್ಯಾಂಡ್ ಗಡಿಗಳಲ್ಲಿ ವಂಚನೆ ಪ್ರಕರಣದಲ್ಲಿ ಕಾರ್ಯನಿರ್ವಹಿಸಲು ಹಾಗೂ ಸೈಬರ್ಕ್ರೈಂ ಪ್ರಕರಣದಲ್ಲಿ ತೊಡಗಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಭಾರತೀಯ ರಾಯಭಾರಿಗಳು ಸ್ಥಳೀಯ ಅಧಿಕಾರಿಗಳ ಸಹಯೋಗದಿಂದ ಇಂದು 283 ಭಾರತೀಯರನ್ನು ರಕ್ಷಿಸಿದ್ದು, ಅವರನ್ನು ಥೈಲ್ಯಾಂಡ್ನಲ್ಲಿನ ಮೆ ಸೊಟ್ನಿಂದ ಐಎಎಫ್ ವಿಮಾನದ ಮೂಲಕ ಕರೆತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ರೀತಿಯ ಉದ್ಯೋಗ ವಂಚನೆ ಪ್ರಕರಣದ ಬಗ್ಗೆ ಜನರ ಎಚ್ಚರಿಕೆ ವಹಿಸುವಂತೆ ಸರ್ಕಾರ ತಿಳಿಸಿದೆ. ವಿದೇಶದಲ್ಲಿ ಉದ್ಯೋಗಕ್ಕೆ ಹೋಗುವ ಮುನ್ನ ನೇಮಕಾತಿ ಏಜೆಂಟ್ ಮತ್ತು ಕಂಪನಿಗಳ ಕುರಿತು ಪೂರ್ವ ಪರಿಶೀಲನೆ ನಡೆಸುವುದು ಅಗತ್ಯ ಎಂದು ಸಲಹೆ ನೀಡಿದೆ.