ಚಂಡೀಗಢ: ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಪಂಜಾಬ್ ರೈತ ಸಂಘಟನೆಗಳು ಇಂದು ಚಂಡೀಗಢ ಚಲೋಗೆ ಕರೆ ನೀಡಿವೆ. ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿ ಚಂಡೀಗಢಕ್ಕೆ ತೆರಳಿ ಅನಿರ್ದಿಷ್ಟಾವದಿ ಪ್ರತಿಭಟನೆಗೆ ಸಜ್ಜಾಗಿದ್ದು, ಒಂದು ವೇಳೆ ಪೊಲೀಸರು ತಡೆದರೆ, ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಚಂಡೀಗಢ ಪೊಲೀಸರು ಎಲ್ಲಾ ಪ್ರವೇಶಗಳನ್ನು ಮುಚ್ಚಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸದಂತೆ ಪ್ರಯಾಣಿಕರಿಗೆ ಸೂಚಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ-ಉಘ್ರಹಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಘ್ರಹಾನ್ ರಸ್ತೆಗಳು, ಹೆದ್ದಾರಿಗಳು ಮತ್ತು ರೈಲುಗಳನ್ನು ತಡೆಯಲು ರೈತರಿಗೆ ಮನವಿ ಮಾಡಿದ್ದಾರೆ. ಹಾಗೆಯೇ ಎಲ್ಲಾ ರೈತ ಸಂಘಟನೆಗಳು ಚಂಡೀಗಢ ತಲುಪಿ ಮೋರ್ಚಾ ಸೇರುವ ಮೂಲಕ ಬೃಹತ್ ಪ್ರತಿಭಟನೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಆದರೆ, ರೈತರ ಪ್ರತಿಭಟನೆಗೆ ಚಂಡೀಗಢದಲ್ಲಿ ಇನ್ನೂ ಸ್ಥಳಾವಕಾಶದ ಅನುಮತಿ ದೊರೆತಿಲ್ಲ. ಹೀಗಾಗಿ, ಅವರನ್ನು ನಗರದ ಪ್ರವೇಶದ ಪಾಯಿಂಟ್ಗಳಲ್ಲೇ ತಡೆದು ನಿಲ್ಲಿಸುವ ಪ್ರಯತ್ನ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರೈತರ ಪ್ರವೇಶವನ್ನು ತಡೆಯುವ ಮೂಲಕ ಪಂಜಾಬ್ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕುತ್ತಿದೆ ಎಂದು ಎಸ್ಕೆಎಂ ಆರೋಪಿಸಿದೆ.
ಕೃಷಿ ನೀತಿಯ ಅನುಷ್ಠಾನ, ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಭೂ ವಿತರಣೆ, ರೈತರು ಮತ್ತು ಕಾರ್ಮಿಕರ ಸಾಲ ಮನ್ನಾ ಸೇರಿದಂತೆ ರೈತರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಎಸ್ಕೆಎಂ ಜೊತೆ ನಡೆದ ಹಲವು ಗಂಟೆಗಳ ಮಾತುಕತೆ ವಿಫಲವಾಗಿದ್ದು, ಇದರ ಬೆನ್ನಲ್ಲೇ ರೈತ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಕುರಿತು ಮಾತನಾಡಿರುವ ಉಘ್ರಹಾನ್, ಮುಖ್ಯಮಂತ್ರಿ ಜೊತೆಗಿನ ಚರ್ಚೆಗಳು ಸುಗಮವಾಗಿ ನಡೆಯುತ್ತಿತ್ತು. ನಮ್ಮ 18 ಬೇಡಿಕೆಗಳಲ್ಲಿ ಎಂಟು, ಒಂಬತ್ತು ಬೇಡಿಕೆಗಳ ಬಗ್ಗೆ ಚರ್ಚೆಯ ನಂತರ, ಸಿಎಂ ಮಾನ್ ಅವರು ತಾವು ಕಣ್ಣಿನ ಸೋಂಕಿನಿಂದು ಬಳಲುತ್ತಿದ್ದು, ತೆರಳಬೇಕಿದೆ ಎಂದು ಹೇಳಿ ಸಭೆಯಿಂದ ಹೊರನಡೆದರು ಎಂದರು.