ನವದೆಹಲಿ: ಹೈಕೋರ್ಟ್ಗಳ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ದಾಖಲಾಗುವ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಅನುಮತಿ ನೀಡಿದ್ದ ಲೋಕಪಾಲ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಲೋಕಪಾಲ ಕ್ರಮವು ತೀರಾ ಕಳವಳಕಾರಿ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥದ್ದಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ವಿಶೇಷ ಪೀಠವು ಕೇಂದ್ರ ಸರ್ಕಾರ, ಲೋಕಪಾಲ್ ರಿಜಿಸ್ಟ್ರಾರ್ ಮತ್ತು ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ನ್ಯಾಯಮೂರ್ತಿಗಳ ಎಂದಿಗೂ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013 ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅಭಯ್ ಎಸ್ ಓಕಾ ಅವರನ್ನೂ ಒಳಗೊಂಡ ನ್ಯಾಯಪೀಠವು ದೂರುದಾರರು ನ್ಯಾಯಮೂರ್ತಿಗಳ ಹೆಸರನ್ನು ಬಹಿರಂಗಪಡಿಸದಂತೆ ತಡೆಯಾಜ್ಞೆ ನೀಡಿತು ಮತ್ತು ಸಲ್ಲಿಸಲಾದ ದೂರನ್ನು ಗೌಪ್ಯವಾಗಿಡುವಂತೆ ದೂರುದಾರರಿಗೆ ನಿರ್ದೇಶಿಸಿತು. ಲೋಕಪಾಲ್ ಜನವರಿ 27ರಂದು ಹೊರಡಿಸಿದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆಯನ್ನು ನಡೆಸುತ್ತಿದೆ.
"ಕೇಂದ್ರ ಸರ್ಕಾರ, ಲೋಕಪಾಲ್ ರಿಜಿಸ್ಟ್ರಾರ್ ಮತ್ತು ದೂರುದಾರರಿಗೆ ನೋಟಿಸ್ ನೀಡಿ. ದೂರುದಾರರ ಗುರುತನ್ನು ಮರೆಮಾಚುವಂತೆ ಮತ್ತು ದೂರುದಾರರು ವಾಸಿಸುವ ವಿಳಾಸಕ್ಕೆ ಹೈಕೋರ್ಟ್ನ ರಿಜಿಸ್ಟ್ರಾರ್ (ನ್ಯಾಯಾಂಗ) ಮೂಲಕ ನೋಟಿಸ್ ಜಾರಿ ಮಾಡುವಂತೆ ರಿಜಿಸ್ಟ್ರಾರ್ (ನ್ಯಾಯಾಂಗ) ಗೆ ನಿರ್ದೇಶಿಸಲಾಗಿದೆ" ಎಂದು ಅದು ಹೇಳಿದೆ. "ಈ ಮಧ್ಯೆ, ಲೋಕಪಾಲ ಆದೇಶಕ್ಕೆ ತಡೆಯಾಜ್ಞೆ ಇರುತ್ತದೆ" ಎಂದು ನ್ಯಾಯಪೀಠ ಹೇಳಿದೆ.