ನವದೆಹಲಿ: ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಕತಾರ್ ದೊರೆ ತಮೀಮ್ ಬಿನ್ ಹಮದ್ ಅಲ್ ಥನಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಗಾರ್ಡ್ ಆಫ್ ಆನರ್ ಮೂಲಕ ಸರ್ಕಾರಿ ಗೌರವಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಹಿರಿಯ ಸಚಿವರು ಕತಾರ್ ದೊರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಕತಾರ್ ನಿಯೋಗವನ್ನು ರಾಷ್ಟ್ರಪತಿ ಮುರ್ಮು ಸ್ವಾಗತಿಸಿದರು.
ಭಾರತ ಭೇಟಿಗಾಗಿ ತಮೀಮ್ ಬಿನ್ ಹಮದ್ ಅಲ್ ಥಾನಿ ಭಾರತಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡು ವಿಶೇಷ ಗೌರವ ನೀಡಿದ್ದರು. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಕೂಡ ಉಪಸ್ಥಿತರಿದ್ದರು. "ಕತಾರ್ ದೊರೆ ತನ್ನ ಸಹೋದರನಿದ್ದಂತೆ" ಎಂದು ಹೇಳಿದ್ದ ಪ್ರಧಾನಿ ಮೋದಿ, ಅವರ ಭೇಟಿ ಫಲಪ್ರದವಾಗಲಿ ಎಂದು ಹಾರೈಸಿದ್ದರು.
ಕತಾರ್ ದೊರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದು, ಅವರಿಗಾಗಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಕತಾರ್ ದೊರೆಯೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳ ನಿಯೋಗವೂ ಆಗಮಿಸಿದೆ. ಈ ಮೊದಲು 2015ರ ಮಾರ್ಚ್ನಲ್ಲಿ ಕತಾರ್ ದೊರೆ ಭಾರತಕ್ಕೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿಯಾಗಿದೆ.
ಕತಾರ್ನಲ್ಲಿ ಭಾರತದ ಅತೀ ದೊಡ್ಡ ವಲಸಿಗ ಸಮುದಾಯವಿದೆ. ಕತಾರ್ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಅವರ ಸಕಾರಾತ್ಮಕ ಕೊಡುಗೆಗಳು ಮೆಚ್ಚುಗೆ ಪಡೆದಿವೆ. ಈ ಭೇಟಿಯು ಎರಡು ದೇಶಗಳ ನಡುವಿನ ಹಲವು ಅಭಿವೃದ್ಧಿ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.