ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಇಂದು ಮುಂಬೈನ ನೌಕನೆಲೆಯಲ್ಲಿ ಐಎನ್ಎಸ್ ಸೂರತ್, ಐಎನ್ಎಸ್ ನೀಲ್ಗಿರಿ ಮತ್ತು ಐಎನ್ಎಸ್ ವಾಘ್ಶೀರ್ ಎಂಬ ಮೂರು ಯುದ್ಧ ನೌಕೆಗಳನ್ನು ದೇಶಕ್ಕೆ ಸಮರ್ಪಣೆ ಮಾಡಿದರು.
ಈ ಮೂರೂ ಯುದ್ಧ ನೌಕೆಗಳು, ರಕ್ಷಣಾ ಕ್ಷೇತ್ರದಲ್ಲಿ ದೇಶ ಜಾಗತಿಕ ನಾಯಕ ಆಗುವ ನಿಟ್ಟಿನಲ್ಲಿನ ನಮ್ಮ ಪ್ರಯತ್ನಕ್ಕೆ ಬಲ ತುಂಬಲಿದೆ. ಸ್ವಾವಲಂಬಿ ರಕ್ಷಣಾ ವಲಯವನ್ನು ನಿರ್ಮಿಸಲು ಭಾರತದ ಬದ್ಧತೆಯನ್ನು ಇದು ಒತ್ತಿ ಹೇಳುತ್ತದೆ ಎಂದು ಪ್ರಧಾನಿಗಳು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಕೂಡ ಹಾಜರಿದ್ದರು.
ರಕ್ಷಣಾ ಉತ್ಪಾದನೆ ಮತ್ತು ಸಾಗರ ಭದ್ರತೆಯಲ್ಲಿ ಜಾಗತಿಕ ನಾಯಕನಾಗಬೇಕು ಎಂಬ ಭಾರತದ ದೂರದೃಷ್ಟಿಗೆ ಈ ಮೂರು ಪ್ರಮುಖ ಯುದ್ಧ ನೌಕೆಗಳು ಪ್ರಮುಖ ಮುನ್ನೆಡಯಾಗಿದೆ ಎಂದು ಸರ್ಕಾರದ ಪ್ರಕಣೆಯಲ್ಲಿ ತಿಳಿಸಿದೆ.
ಈ ಯುದ್ದ ನೌಕೆಗಳನ್ನು ಆತ್ಮನಿರ್ಭರ್ ಭಾರತದ ಗೌರವಾರ್ಥವಾಗಿ ಮಜಾಗನ್ ಡಾಕ್ಶಿಪ್ ಸಂಸ್ಥೆಯ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಐಎನ್ಎಸ್ ಸೂರತ್ ಪಿ15ಬಿ ಮಾರ್ಗಸೂಚಿತ ಕ್ಷಿಪಣಿ ವಿಧ್ವಂಸಕ ವ್ಯವಸ್ಥೆ ನಾಲ್ಕನೇ ಮತ್ತು ಅಂತಿಮ ನೌಕೆಯಾಗಿದೆ. ಇದನ್ನು ಶೇ 75ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾಗಿದ್ದು, ಇದು ಅತ್ಯಾಧುನಿಕ ಶಸ್ತ್ರಾಸ್ತ್ರ- ಸೆನ್ಸರ್ ಪ್ಯಾಕೇಜ್ ಹಾಗೂ ಸುಧಾರಿತ ನೆಟ್ವರ್ಕ್ ಕೇಂದ್ರಿತ ಸಾಮರ್ಥ್ಯವನ್ನು ಹೊಂದಿದೆ ಎಂದು ರಕ್ಷಣಾ ಪಡೆ ಹೇಳಿದೆ.