ಛತ್ತೀಸ್ಗಢ : ರಾಜ್ಯದಲ್ಲಿ ನಕ್ಸಲರು ಮತ್ತೆ ನೆತ್ತರು ಹರಿಸಿದ್ದಾರೆ. ಶೋಧ ಕಾರ್ಯಾಚರಣೆ ಮುಗಿಸಿಕೊಂಡು ಬರುತ್ತಿದ್ದ ಭದ್ರತಾ ಪಡೆ ವಾಹನವನ್ನು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟಿಸಿದ್ದು, 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ದೇಶದಲ್ಲಿ ನಕ್ಸಲ್ವಾದ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿರುವ ನಡುವೆ ಈ ಘೋರ ದುರಂತ ನಡೆದಿದೆ.
ಬಿಜಾಪುರ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಕೆಲ ದಿನಗಳಿಂದ ನಕ್ಸಲ್ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಾವೋವಾದಿಗಳು ಹತ್ಯೆಯಾಗಿದ್ದರು. ಎನ್ಕೌಂಟರ್ ಮುಗಿಸಿಕೊಂಡು ಬರುತ್ತಿದ್ದ ಯೋಧರ ವಾಹನಕ್ಕಾಗಿ ಕಾದು ಕುಳಿತ ನಕ್ಸಲರು ಭಾನುವಾರ 2.15 ರ ಸುಮಾರಿಗೆ ಅಂಬೇಲಿ ನಾಲಾ ಬಳಿ ಐಇಡಿ ಬಳಸಿ ಭದ್ರತಾ ಪಡೆಗಳ ವಾಹನವನ್ನು ಸ್ಫೋಟಿಸಿದ್ದಾರೆ.
ವಾಹನದಲ್ಲಿ 8 ಯೋಧರು ಇದ್ದರು. ಐಇಡಿ ಸ್ಫೋಟದಿಂದ ಇಡೀ ವಾಹನ ಛಿದ್ರವಾಗಿದೆ. ಇದರಿಂದ ಅದರಲ್ಲಿ ಎಲ್ಲ ಯೋಧರು ಮತ್ತು ಚಾಲಕ ಸೇರಿ 9 ಮಂದಿ ಹುತಾತ್ಮರಾಗಿದ್ದಾರೆ. ಘಟನೆಯ ಬಳಿಕ ಈ ಪ್ರದೇಶದಲ್ಲಿ ನಕ್ಸಲ್ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ. ಹಂತಕರನ್ನು ಹುಡುಕಿ ಹತ್ಯೆ ಸದೆ ಬಡಿಯಲಾಗುವುದು ಎಂದು ಬಸ್ತಾರ್ ಐಜಿ ಸುಂದರರಾಜ್ ತಿಳಿಸಿದ್ದಾರೆ.
ಇನ್ನು, ಈ ವರ್ಷದ 6 ದಿನಗಳಲ್ಲಿ ನಡೆದ ಮೂರನೇ ನಕ್ಸಲೀಯರ ದಾಳಿ ಇದಾಗಿದೆ. ಜನವರಿ 3 ರಂದು ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ 3 ನಕ್ಸಲೀಯರು ಹತರಾಗಿದ್ದರು. ಜನವರಿ 4ರಂದು ದಾಂತೇವಾಡದಲ್ಲಿ 5 ನಕ್ಸಲೀಯರು ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಕಾರ್ಯಾಚರಣೆಯಲ್ಲಿ ದಾಂತೇವಾಡದ ಹೆಡ್ಕಾನ್ಸ್ಟೇಬಲ್ ಒಬ್ಬರು ಹುತಾತ್ಮರಾಗಿದ್ದರು.