ಅಲಹಾಬಾದ್ : ವಿವಾಹಿತ ಮಹಿಳೆಯರ ಅನುಮಾನಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆಯೊಬ್ಬರು ಅತ್ತೆ-ಮಾವನ ಮನೆಯಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದರೆ ಮತ್ತು ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿತ್ತು ಎಂಬುದಕ್ಕೆ ಸಾಕ್ಷ್ಯಗಳಿದ್ದರೆ, ಅದನ್ನು ವರದಕ್ಷಿಣೆ ಹತ್ಯೆ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಮಹಿಳೆಯ ಸಾವಿನಲ್ಲಿ ಆರೋಪಿಗಳ ನೇರ ಪಾತ್ರವಿದೆ ಎಂಬುದನ್ನು ಸಾಬೀತುಪಡಿಸಲು ಪ್ರತ್ಯಕ್ಷ ಸಾಕ್ಷಿ ಅಥವಾ ಹೆಚ್ಚುವರಿ ಪುರಾವೆಗಳನ್ನು ಕಡ್ಡಾಯವಾಗಿ ತೋರಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
2010ರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ ಆಕೆಯ ಪತಿ ಸಂದೀಪ್ ಸಿಂಗ್ ಹೋರಾನಿಗೆ ಕೆಳ ನ್ಯಾಯಾಲಯವು 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಂತ್ರಸ್ತೆಯ ಸಾವು ಅಸಹಜ ಹಾಗೂ ವರದಕ್ಷಿಣೆ ಕಿರುಕುಳದಿಂದ ಕೂಡಿದೆ ಎಂಬುದನ್ನು ಎತ್ತಿಹಿಡಿಯಿತು.
ಆದಾಗ್ಯೂ, ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಜೀವಾವಧಿ ಶಿಕ್ಷೆ ನೀಡಬೇಕು ಮತ್ತು ಕೆಳ ನ್ಯಾಯಾಲಯ ಈ ಶಿಕ್ಷೆಗೆ ಬಲವಾದ ಕಾರಣಗಳನ್ನು ವಿವರಿಸಿಲ್ಲ ಎಂಬುದನ್ನು ಹೈಕೋರ್ಟ್ ಉಲ್ಲೇಖಿಸಿದೆ. ಘಟನೆ ನಡೆದು 16 ವರ್ಷಗಳಾಗಿರುವುದು, ಆರೋಪಿ ಈಗಾಗಲೇ 7 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದು ಹಾಗೂ ಆತನ ಉತ್ತಮ ನಡತೆಯನ್ನು ಪರಿಗಣಿಸಿ, ಜೀವಾವಧಿ ಶಿಕ್ಷೆಯನ್ನು 10 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿ ಆದೇಶಿಸಿದೆ. ಆದರೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498-A, 406 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ವಿಧಿಸಲಾಗಿದ್ದ ದೋಷನಿರ್ಣಯವನ್ನು ಹೈಕೋರ್ಟ್ ಯಥಾವತ್ತಾಗಿ ಕಾಯ್ದುಕೊಂಡಿದೆ.