image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗೋಬರ್ಧನ್ ಯೋಜನೆಗೆ ₹23,731 ಕೋಟಿ ಅನುದಾನಕ್ಕೆ ಕೇಂದ್ರ ಒಪ್ಪಿಗೆ: ಸಿಬಿಜಿ ಉತ್ಪಾದನೆ 10 ಪಟ್ಟು ಹೆಚ್ಚಿಸುವ ಗುರಿ

ಗೋಬರ್ಧನ್ ಯೋಜನೆಗೆ ₹23,731 ಕೋಟಿ ಅನುದಾನಕ್ಕೆ ಕೇಂದ್ರ ಒಪ್ಪಿಗೆ: ಸಿಬಿಜಿ ಉತ್ಪಾದನೆ 10 ಪಟ್ಟು ಹೆಚ್ಚಿಸುವ ಗುರಿ

ನವದೆಹಲಿ: ದೇಶೀಯ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸಾವಯವ ತ್ಯಾಜ್ಯವನ್ನು ಶುದ್ಧ ಇಂಧನವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು 23,731 ಕೋಟಿ ರೂಪಾಯಿ ವೆಚ್ಚದ 'ಗೋಬರ್ಧನ್​' (ರಾಷ್ಟ್ರೀಯ ವೃತ್ತಾಕಾರದ ಜೈವಿಕ ಇಂಧನ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಯೋಜನೆಯನ್ನು 2026-27 ರಿಂದ 2035-36ರ ಅವಧಿಯಲ್ಲಿ ಜಾರಿಗೆ ತರಲಾಗುವುದು ಹಾಗೂ ದೇಶೀಯ ಸಿಬಿಜಿ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಲಾಗುವುದು ಎಂದರು. ದೇಶದಲ್ಲಿ ಲಭ್ಯವಿರುವ ಕೃಷಿ ತ್ಯಾಜ್ಯ, ಸಗಣಿ, ಪ್ರೆಸ್​ಮಡ್ ಹಾಗೂ ನಗರಸಭೆಯ ಸಾವಯವ ತ್ಯಾಜ್ಯಗಳನ್ನು ಬಳಸಿ ಶುದ್ಧ ಇಂಧನ ಮತ್ತು ಸಾವಯವ ಗೊಬ್ಬರ ತಯಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಉತ್ಪಾದಕರಿಗೆ ದೀರ್ಘಾವಧಿ ಆದಾಯದ ಭರವಸೆ ನೀಡಲು ಪ್ರತಿ ಎಂಎಂಬಿಟಿಯುಗೆ 2,110 ರೂಪಾಯಿಯಂತೆ ಕನಿಷ್ಠ 10 ವರ್ಷಗಳ ಕಾಲ ಸ್ಥಿರ ಸಿಬಿಜಿ ಬೆಲೆ ನಿಗದಿಪಡಿಸಲಾಗಿದೆ. ಜೊತೆಗೆ, ಸಿಟಿ ಗ್ಯಾಸ್ ವಿತರಣಾ ಸಂಸ್ಥೆಗಳು ಸಿಎನ್‌ಜಿ ಮತ್ತು ಪಿಎನ್‌ಜಿ ಜಾಲಗಳಲ್ಲಿ 2026-27ರಲ್ಲಿ ಶೇಕಡಾ 3 ಹಾಗೂ ಮುಂದಿನ ವರ್ಷಗಳಲ್ಲಿ ಹಂತಹಂತವಾಗಿ ಶೇಕಡಾ 5ರಷ್ಟು ಸಿಬಿಜಿ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ಸಿಬಿಜಿ ಯೋಜನೆಗಳಿಗೆ ಪ್ರತಿ ಟನ್ ಸಾಮರ್ಥ್ಯಕ್ಕೆ 2 ಕೋಟಿ ರೂಪಾಯಿವರೆಗೆ ಬಂಡವಾಳ ನೆರವು ಸಿಗಲಿದ್ದು, ಎಂಎಸ್​ಎಂಇ ಆಧಾರಿತ ಘಟಕಗಳಿಗೆ ವಿಶೇಷ ಸಾಲ ಖಾತರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ 200ಕ್ಕೂ ಹೆಚ್ಚು ಹೊಸ ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಇಡೀ ಮೌಲ್ಯ ಸರಪಳಿಯಲ್ಲಿ ಸಂಯೋಜಿತ ವೇದಿಕೆ ಸೃಷ್ಟಿಸುವ ಮೂಲಕ ಹೂಡಿಕೆದಾರರಿಗೆ ಖಚಿತತೆ ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಲಾಗಿದೆ.

Category
ಕರಾವಳಿ ತರಂಗಿಣಿ