image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

'ವಂದೇ ಮಾತರಂ' ಕಡ್ಡಾಯ ಕಾನೂನಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ

'ವಂದೇ ಮಾತರಂ' ಕಡ್ಡಾಯ ಕಾನೂನಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ

ನವದೆಹಲಿ : ಸಂಸತ್ತಿನಲ್ಲಿ ಅಂಗೀಕರಿಸಲಾದ 'ವಂದೇ ಮಾತರಂ' ಅಪಮಾನ ವಿರೋಧಿ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ತೀವ್ರವಾಗಿ ಟೀಕಿಸಿದೆ. ಈ ಕಾನೂನು ನಾಗರಿಕರ ಧಾರ್ಮಿಕ ಹಾಗೂ ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಬಣ್ಣಿಸಿರುವ ಮಂಡಳಿಯು, ಕಾನೂನಿನ ಬಲವಂತದ ಮೂಲಕ ದೇಶಭಕ್ತಿಯ ಭಾವನೆಗಳನ್ನು ಹೇರಬಾರದು ಎಂದು ಸರ್ಕಾರವನ್ನು ಆಗ್ರಹಿಸಿದೆ. ಜುಲೈ 31 ರಂದು ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಯಲ್ಲಿ, ಈ ಮಸೂದೆಯು ದೇಶದ ಸಾಂವಿಧಾನಿಕ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಸಂಘಟನೆ ತಿಳಿಸಿದೆ. ಧಾರ್ಮಿಕ ಸಂಕೇತ ಅಥವಾ ಅರ್ಥಗಳನ್ನು ಹೊಂದಿರುವ ಹಾಡುಗಳು ಮತ್ತು ಘೋಷಣೆಗಳನ್ನು ಹೇಳುವಂತೆ ನಾಗರಿಕರನ್ನು ಒತ್ತಾಯಿಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಮಂಡಳಿಯ ವಕ್ತಾರ ಡಾ. ಎಸ್‌ಕ್ಯೂಆರ್ ಇಲ್ಯಾಸ್ ಮಾತನಾಡಿ, ಸಂವಿಧಾನ ರಚನಾ ಸಭೆಯು 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಸ್ವೀಕಾರಾರ್ಹವೆಂದು ಪರಿಗಣಿಸಿತ್ತು. ಉಳಿದ ಭಾಗಗಳಲ್ಲಿನ ಧಾರ್ಮಿಕ ಸ್ವರೂಪವು ಭಾರತದ ಜಾತ್ಯತೀತತೆಗೆ ಹೊಂದುವುದಿಲ್ಲ. ಅದಲ್ಲದೆ, ಈ ಗೀತೆಯ ಕೆಲವು ಭಾಗಗಳು ಮಾತೃಭೂಮಿಯನ್ನು ದೇವತೆಯಾಗಿ ಚಿತ್ರಿಸುವುದರಿಂದ, ಅದು ಇಸ್ಲಾಮಿಕ್ ನಂಬಿಕೆಯ 'ತೌಹೀದ್' (ಏಕದೇವೋಪಾಸನೆ) ತತ್ವಕ್ಕೆ ವಿರುದ್ಧವಾಗಿದೆ. ಆದ್ದರಿಂದ ಮುಸ್ಲಿಮರನ್ನು ತಮ್ಮ ನಂಬಿಕೆಗೆ ವಿರುದ್ಧವಾದ ಆಚರಣೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸುವುದು ಸಂಪೂರ್ಣವಾಗಿ ಅಂಗೀಕಾರಾರ್ಹವಲ್ಲ ಎಂದು ವಿವರಿಸಿದ್ದಾರೆ. ಸಂವಿಧಾನದ 19 ಮತ್ತು 25ನೇ ವಿಧಿಗಳನ್ನು ಉಲ್ಲೇಖಿಸಿದ ಅವರು, ಈ ವಿಧಿಗಳು ಧಾರ್ಮಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತವೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಆತ್ಮಸಾಕ್ಷಿಗೆ ವಿರುದ್ಧವಾದ ಕಾರ್ಯಗಳಿಂದ ದೂರವಿರಲು ಸಾಂವಿಧಾನಿಕ ಹಕ್ಕಿದೆ. ದೇಶಪ್ರೇಮವನ್ನು ಯಾರ ಧಾರ್ಮಿಕ ನಂಬಿಕೆಗಳಿಂದಲೂ ನಿರ್ಣಯಿಸಬಾರದು; ಸಮಾನ ಗೌರವ, ನ್ಯಾಯ ಮತ್ತು ಸ್ವಾತಂತ್ರ್ಯ ದೊರೆತಾಗ ಮಾತ್ರ ಏಕತೆಯಿಂದ ಕೂಡಿದ ಬಲವಾದ ಭಾರತ ನಿರ್ಮಾಣ ಸಾಧ್ಯ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸಿದೆ.

Category
ಕರಾವಳಿ ತರಂಗಿಣಿ