ನವದೆಹಲಿ : ದೆಹಲಿಯ ಜಂತರ್ ಮಂತರ್ನಲ್ಲಿ ಜುಲೈ 20ರಂದು ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಲಾಠಿ ಚಾರ್ಜ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ತಾವು ನಿರಾಕರಿಸಿದ್ದೇವೆ ಎಂಬ ವರದಿಗಳನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ತೀವ್ರವಾಗಿ ಅಲ್ಲಗೆಳೆದಿದ್ದಾರೆ. ಇಂತಹ ಮಾಧ್ಯಮ ವರದಿಗಳನ್ನು ಬೇಜವಾಬ್ದಾರಿತನ ಎಂದು ಟೀಕಿಸಿರುವ ಅವರು, ಮಾಧ್ಯಮಗಳ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮತ್ತು ವಿಡಿಯೋ ಪ್ರಸಾರವನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಮಯದಲ್ಲಿ ಪ್ರತಿಕ್ರಿಯಿಸಿದ ಸಿಜೆಐ, ತಾವು ಹೇಳದೇ ಇರುವ ವಿಷಯಗಳನ್ನು ತಮ್ಮ ಮೇಲೆ ಹೇರಲಾಗುತ್ತಿದೆ ಎಂದು ಮಾಧ್ಯಮಗಳ ನಡವಳಿಕೆಯನ್ನು ಖಂಡಿಸಿದರು. ಜುಲೈ 20ರಂದು ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಪ್ರಶ್ನಿಸಿ ಯಾವುದೇ ಔಪಚಾರಿಕ ರಿಟ್ ಅರ್ಜಿ ಸಲ್ಲಿಕೆಯಾಗಿರಲಿಲ್ಲ, ಅದು ಕೇವಲ ಒಂದು ಮನವಿಯಷ್ಟೇ ಆಗಿತ್ತು (ಪೆಟಿಷನ್ ಆಗಿರಲಿಲ್ಲ).
ಕಳೆದ ಎರಡು ದಿನಗಳಲ್ಲಿ ಲಾಠಿಚಾರ್ಜ್ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ ಹಾಗೂ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಗೆ ಪಟ್ಟಿ ಮಾಡಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸದೆ ಸುಳ್ಳು ವರದಿಗಳನ್ನು ಮಾಡಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇಂದು ಬೆಳಿಗ್ಗೆ 10 ಗಂಟೆಯವರೆಗೂ ನ್ಯಾಯಾಲಯಕ್ಕೆ ಒಂದು ಪುಟದ ಅರ್ಜಿಯೂ ಸಲ್ಲಿಕೆಯಾಗಿರಲಿಲ್ಲ, ಕೇವಲ ಕಳುಹಿಸಲಾದ ಸಾಮಾನ್ಯ ಮನವಿಯನ್ನು ರಿಟ್ ಅರ್ಜಿ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಮಾಧ್ಯಮಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ವರದಿ ಮಾಡುತ್ತಿರುವುದು ವಿಷಾದನೀಯ ಎಂದಿದ್ದಾರೆ.