image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಂಸತ್ ಸರ್ವಪಕ್ಷ ಸಭೆಯಲ್ಲಿ ಹೈಡ್ರಾಮಾ: ವಿಪಕ್ಷಗಳ ವಾಕ್‌ಔಟ್!

ಸಂಸತ್ ಸರ್ವಪಕ್ಷ ಸಭೆಯಲ್ಲಿ ಹೈಡ್ರಾಮಾ: ವಿಪಕ್ಷಗಳ ವಾಕ್‌ಔಟ್!

ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಭಾನುವಾರ ನಡೆದ ಸರ್ವಪಕ್ಷ ಸಭೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದರನ್ನು ಆಹ್ವಾನಿಸಿದ ಲೋಕಸಭಾ ಸ್ಪೀಕರ್ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಭೆಯಿಂದ ಹೊರನಡೆದಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ, ಉದ್ಧವ್​ ಬಣದ ಆರು ಬಂಡಾಯ ಸಂಸದರ ವಿಲೀನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇತ್ತೀಚೆಗಷ್ಟೇ ಅನುಮೋದನೆ ನೀಡಿದ್ದರು. ಇದರ ಬೆನ್ನಲ್ಲೇ, ಟಿಎಂಸಿ ತೊರೆದು ಅಷ್ಟಾಗಿ ಪರಿಚಯವಿಲ್ಲದ ಎನ್‌ಸಿಪಿಐ ಪಕ್ಷ ಸೇರಿರುವ 20 ಬಂಡಾಯ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಂಡಾಯ ನಾಯಕರನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದೇ ಈಗ ವಿಪಕ್ಷಗಳ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ವಿರೋಧ ಪಕ್ಷಗಳ ಜಂಟಿ ನಿರ್ಧಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಟಿಎಂಸಿ ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದರ ಕುರಿತು ಸ್ಪೀಕರ್ ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರವನ್ನು ಪ್ರತಿಭಟಿಸಲು ವಿರೋಧ ಪಕ್ಷಗಳು ಒಟ್ಟಾಗಿ ಈ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದವು ಎಂದು ಮಾಹಿತಿ ನೀಡಿದ್ದಾರೆ. ಇನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಜೆಎಂಎಂ, ಆಮ್ ಆದ್ಮಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎಡಪಕ್ಷಗಳು ಮತ್ತು ಶಿವಸೇನಾ ಯುಬಿಟಿ ಸೇರಿದಂತೆ ಇಡೀ ವಿರೋಧ ಪಕ್ಷ ಒಟ್ಟಾಗಿ ಸಭೆಯಿಂದ ಹೊರನಡೆದಿದೆ ಎಂದು ತಿಳಿಸಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಒಟ್ಟು ಬಲ 28 ಸದಸ್ಯರು. ಮಾನ್ಯತೆ ಪಡೆಯದ ಎನ್‌ಸಿಪಿಐ ಪಕ್ಷ ಸೇರಿರುವ 20 ಬಂಡಾಯ ಸಂಸದರ ವಿಲೀನಕ್ಕೆ ಸ್ಪೀಕರ್ ಇನ್ನೂ ಅಧಿಕೃತ ಅನುಮೋದನೆ ನೀಡಿಲ್ಲ ಮತ್ತು ಅವರ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇವೆ ಎಂದು ಮೊಯಿತ್ರಾ ನೆನಪಿಸಿದ್ದಾರೆ. ಸಂವಿಧಾನದ 91ನೇ ತಿದ್ದುಪಡಿಯ ನಂತರ ಸದನದಲ್ಲಿ ಇಂತಹ ಬಂಡಾಯಗಾರರಿಗೆ ಪ್ರತ್ಯೇಕ ಬಣ ರಚಿಸಲು ಯಾವುದೇ ಅವಕಾಶವಿಲ್ಲ. ಹೀಗಿರುವಾಗ ಯಾವ ಆಧಾರದ ಮೇಲೆ ಸಂಸದೀಯ ವ್ಯವಹಾರಗಳ ಸಚಿವರು ಈ 20 ಬಂಡಾಯ ಸಂಸದರಿಗೆ ಆಹ್ವಾನ ನೀಡಿದ್ದಾರೆ ಮತ್ತು ಅವರು ಈ ಸಭೆಯಲ್ಲಿ ಹೇಗೆ ಭಾಗವಹಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ತಮ್ಮ ತೀವ್ರ ಆಕ್ಷೇಪ ಹಾಗೂ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸಿದ ಬೆನ್ನಲ್ಲೇ, ಮುಂಬರುವ ಅಧಿವೇಶನದ ಕಾರ್ಯಸೂಚಿ ಹಾಗೂ ಜನರ ಸಮಸ್ಯೆಗಳ ಚರ್ಚೆಯಲ್ಲಿ ಭಾಗಿಯಾಗಲು ವಿಪಕ್ಷಗಳು ಕೆಲ ಸಮಯದ ನಂತರ ಪುನಃ ಸಭೆಗೆ ಮರಳಿವೆ. ಸಭೆಗೆ ಮರಳಿದ ಸದಸ್ಯರು ಕಲಾಪದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ