ಅಹಮದಾಬಾದ್ : ಅಹಮದಾಬಾದ್ನ ಗುಜರಾತ್ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿದೆ. ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಧಾರ್ಮಿಕ ಆಚರಣೆಗಳು ನಡೆಯದೇ, ಕೇವಲ ನೋಂದಣಿ ಮಾಡಿಸುವುದರಿಂದ ಮಾತ್ರ ಹಿಂದೂ ಮದುವೆಗೆ ಕಾನೂನುಬದ್ಧ ಮಾನ್ಯತೆ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಯು.ಕೆ ಮೂಲದ ಕೌಶಲ್ ಸೋನಾರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆರ್.ಟಿ. ವಾಚಾನಿ ಅವರ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಕೌಟುಂಬಿಕ ನ್ಯಾಯಾಲಯವೊಂದು ಇವರ ಆಪಾದಿತ ವಿವಾಹವನ್ನು ಅನೂರ್ಜಿತ ಎಂದು ಘೋಷಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿತ್ತು. ನವೆಂಬರ್ 2025ರಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಈ ಮದುವೆಯನ್ನು ಆರಂಭದಿಂದಲೇ ಅಸಿಂಧು ಎಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆಯ ಪ್ರಕಾರ, ಪ್ರತಿವಾದಿ ಮಹಿಳೆ ಮದುವೆ ಪ್ರಮಾಣಪತ್ರದೊಂದಿಗೆ ತನ್ನ ಪೋಷಕರನ್ನು ಸಂಪರ್ಕಿಸಿದಾಗಲೇ ತನಗೆ ಈ ಆಪಾದಿತ ಮದುವೆಯ ಬಗ್ಗೆ ತಿಳಿಯಿತು ಎಂದು ಕೌಶಲ್ ಸೋನಾರ್ ಕೋರ್ಟ್ಗೆ ತಿಳಿಸಿದ್ದರು. ತಮಗೆ ಯಾವುದೇ ಮದುವೆ ಆಗಿಲ್ಲ, ಯಾವುದೇ ಧಾರ್ಮಿಕ ವಿಧಿವಿಧಾನಗಳು ನಡೆದಿಲ್ಲ ಮತ್ತು ಇಬ್ಬರೂ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸಿಲ್ಲ ಎಂದು ಅವರು ವಾದಿಸಿದ್ದರು. ಅಲ್ಲದೆ, ತಮ್ಮ ಸಹಿಯನ್ನು ವಂಚನೆಯಿಂದ ಪಡೆಯಲಾಗಿದೆ ಎಂದು ಆರೋಪಿಸಿದ್ದರು. ವಿಚಾರಣೆ ವೇಳೆ ಪ್ರತಿವಾದಿ ಮಹಿಳೆ ಕೂಡ ಕೌಟುಂಬಿಕ ನ್ಯಾಯಾಲಯದ ಮುಂದೆ ಯಾವುದೇ ವಿವಾಹದ ಆಚರಣೆಗಳು ನಡೆದಿಲ್ಲ ಮತ್ತು ಇಬ್ಬರ ನಡುವೆ ದಾಂಪತ್ಯ ಸಂಬಂಧ ಏರ್ಪಟ್ಟಿಲ್ಲ ಎಂದು ನಿಸ್ಸಂದಿಗ್ಧವಾಗಿ ಒಪ್ಪಿಕೊಂಡಿದ್ದರು. ಆದಾಗ್ಯೂ, ಕೌಟುಂಬಿಕ ನ್ಯಾಯಾಲಯವು ಮದುವೆ ಪ್ರಮಾಣಪತ್ರ ಇರುವುದನ್ನು ಪರಿಗಣಿಸಿ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ಅರ್ಜಿಯನ್ನು ವಜಾಗೊಳಿಸಿ ತಪ್ಪು ಮಾಡಿದೆ ಎಂದು ಹೈಕೋರ್ಟ್ ಗಮನಿಸಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿದ ಹೈಕೋರ್ಟ್, ಸಪ್ತಪದಿಯಂತಹ ಅತ್ಯಗತ್ಯ ಸಂಪ್ರದಾಯಗಳು ಹಿಂದೂ ವಿವಾಹದ ಅಡಿಪಾಯವಾಗಿವೆ ಎಂದು ಹೇಳಿದೆ. ಹೋಮಕುಂಡದ ಮುಂದೆ ವಧು-ವರರು ಜಂಟಿಯಾಗಿ ಏಳು ಹೆಜ್ಜೆಗಳನ್ನು ಇಡುವ ಸಪ್ತಪದಿ ವಿಧಿಯು ಮದುವೆಗೆ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಕಾನೂನು ಸ್ಥಾನಮಾನವನ್ನು ಒದಗಿಸುತ್ತದೆ. ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಮದುವೆಯ ನೋಂದಣಿಯು ಕೇವಲ ಈಗಾಗಲೇ ಕಾನೂನುಬದ್ಧವಾಗಿ ನಡೆದಿರುವ ಮದುವೆಗೆ ಪುರಾವೆಯಾಗಿ ಕೆಲಸ ಮಾಡುತ್ತದೆ ಅಷ್ಟೇ. ಆದರೆ, ಮೂಲಭೂತ ಧಾರ್ಮಿಕ ವಿಧಿಗಳೇ ನಡೆಯದಿದ್ದಾಗ ಕೇವಲ ಪ್ರಮಾಣಪತ್ರದಿಂದ ಮದುವೆಗೆ ಮಾನ್ಯತೆ ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮದುವೆ ಎನ್ನುವುದು ಕೇವಲ ಹಾಡು, ನೃತ್ಯ, ಊಟದ ಸಮಾರಂಭ ಅಥವಾ ವಾಣಿಜ್ಯ ವಹಿವಾಟಿನ ಸಂದರ್ಭವಲ್ಲ. ಹಿಂದೂ ಕಾನೂನಿನಡಿಯಲ್ಲಿ ಮದುವೆಯನ್ನು ಒಂದು ಪವಿತ್ರ 'ಸಂಸ್ಕಾರ' ಎಂದು ಪರಿಗಣಿಸಲಾಗುತ್ತದೆ. ಇದು ಹೊಸ ಕುಟುಂಬದ ಅಡಿಪಾಯವನ್ನು ರೂಪಿಸುತ್ತದೆ ಮತ್ತು ಭಾರತೀಯ ಸಮಾಜದಲ್ಲಿ ಇದಕ್ಕೆ ಅತ್ಯುನ್ನತ ಸ್ಥಾನಮಾನವಿದೆ. ಆದ್ದರಿಂದ, ಯುವಕ ಹಾಗೂ ಯುವತಿಯರು ವಿವಾಹದ ಬಂಧಕ್ಕೆ ಒಳಗಾಗುವ ಮುನ್ನ ಅದರ ಪವಿತ್ರ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದೆ. ಹೈಕೋರ್ಟ್ ಈ ಆಪಾದಿತ ವಿವಾಹವನ್ನು ರದ್ದುಗೊಳಿಸಿರುವುದರಿಂದ, ವಿವಾಹದ ನೋಂದಣಿ ಮತ್ತು ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಅರ್ಜಿದಾರರಿಗೆ ಮುಕ್ತ ಅವಕಾಶ ನೀಡಲಾಗಿದೆ.