ನವದೆಹಲಿ : ಗಾಜಾ ಮೇಲಿನ ಇಸ್ರೇಲ್ನ ನಿರಂತರ ದಾಳಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವನ್ನು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಶನಿವಾರ ತೀವ್ರವಾಗಿ ಪ್ರಶ್ನಿಸಿದ್ದಾರೆ. ಇಸ್ರೇಲ್ ಪ್ಯಾಲೆಸ್ತೀನಿಯರ ವಿರುದ್ಧ ನರಮೇಧ ನಡೆಸುತ್ತಿದ್ದು, ಅವರ ಅಸ್ತಿತ್ವವನ್ನೇ ನಾಶಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಸಹೋದ್ಯೋಗಿಗಳು ಪ್ಯಾಲೆಸ್ತೀನಿಯರನ್ನು ಪ್ರಾಣಿಗಳು ಎಂದು ನಿಂದಿಸುತ್ತಾ, ಗಾಜಾವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಬಯಸುತ್ತಿದ್ದಾರೆ ಎಂದು ಸೋನಿಯಾ ಕಿಡಿಕಾರಿದ್ದಾರೆ.
ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಸೋನಿಯಾ ಗಾಂಧಿ ಅವರು, ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗದ ವರದಿಯನ್ನು ಉಲ್ಲೇಖಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ 20,000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 44,000ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಭಾರತವು ಜಾಗತಿಕ ಮಟ್ಟದಲ್ಲಿ ಮೌನದ ಏಕೈಕ ಧ್ವನಿಯಾಗಿ ಉಳಿದುಕೊಂಡಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ಸೋನಿಯಾ ಗಾಂಧಿ, ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಮತ್ತು ಇರಾನ್ ದೇಶಗಳೊಂದಿಗೆ ಉತ್ತಮ ಮಿತ್ರತ್ವ ಹೊಂದಿತ್ತು. ಆದರೆ ಪ್ರಸ್ತುತ ಸರ್ಕಾರವು ಈ ಎರಡು ದೇಶಗಳು ಸೇರಿದಂತೆ ಇಡೀ ಮಧ್ಯಪ್ರಾಚ್ಯದಿಂದ ಭಾರತವನ್ನು ದೂರ ಮಾಡಿದೆ. ಇದರಿಂದಾಗಿ, ನಮ್ಮ ದೇಶಕ್ಕೆ ಸ್ವಾಭಾವಿಕವಾಗಿ ಸಿಗಬೇಕಾಗಿದ್ದ ಮಧ್ಯಸ್ಥಿಕೆ ವಹಿಸುವ ಅವಕಾಶವನ್ನು ಪಾಕಿಸ್ತಾನವು ಬಳಸಿಕೊಳ್ಳಲು ಮೋದಿ ಸರ್ಕಾರ ದಾರಿ ಮಾಡಿಕೊಟ್ಟಿದೆ ಎಂದು ಬರೆದಿದ್ದಾರೆ.
ಮೋದಿ ಸರ್ಕಾರದ ಮೌನ ಮತ್ತು ನಿಷ್ಕ್ರಿಯತೆಯು ಕೇವಲ ನೈತಿಕವಾಗಿ ಖಂಡನೀಯವಲ್ಲ, ದೇಶದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೂ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಡೀ ಜಗತ್ತು ಇಸ್ರೇಲ್ನಿಂದ ದೂರ ಸರಿಯುತ್ತಿರುವಾಗ, ನಾವು ಇಸ್ರೇಲ್ನ ಕಾರ್ಯತಂತ್ರದ ಕಕ್ಷೆಯೊಳಗೆ ಮತ್ತಷ್ಟು ಮುಳುಗುತ್ತಿದ್ದೇವೆ. ಇರಾನ್ ಮೇಲಿನ ಇಸ್ರೇಲ್ ಯುದ್ಧ ಮತ್ತು ಅಲ್ಲಿನ ಉನ್ನತ ರಾಜಕೀಯ ನಾಯಕರ ಹತ್ಯೆಗೆ ಕೇವಲ ಕೆಲವೇ ದಿನಗಳ ಮುಂಚೆ ಪ್ರಧಾನಿ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದು, ಇತಿಹಾಸದಲ್ಲಿ ಒಂದು ಗೊಂದಲಕಾರಿ ಕಾರ್ಯತಂತ್ರದ ನಿರ್ಧಾರವಾಗಿ ಉಳಿಯಲಿದೆ ಎಂದು ಸೋನಿಯಾ ಗಾಂಧಿ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಈ ಲೇಖನದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್, ಸೋನಿಯಾ ಗಾಂಧಿ ಅವರು ದಿನೇ ದಿನೇ ಕುಸಿಯುತ್ತಿರುವ ತಮ್ಮ ಸ್ವಂತ ಪಕ್ಷದ ಬಗ್ಗೆ ಗಮನಹರಿಸಲಿ ಮತ್ತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ ಟಿ.ಆರ್. ಶ್ರೀನಿವಾಸ್ ಮಾತನಾಡಿ, ಸೋನಿಯಾ ಗಾಂಧಿ ಅವರ ಲೇಖನವು ಕೇವಲ ಮುಸ್ಲಿಮರನ್ನು ಓಲೈಸುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಭಾರತವು ಯಾವಾಗಲೂ ಶಾಂತಿಯ ಪರವಾಗಿಯೇ ಮಾತನಾಡಿದೆ ಮತ್ತು ಎಲ್ಲಾ ಜಾಗತಿಕ ಸಮಸ್ಯೆಗಳನ್ನು ಮಾತುಕತೆ ಹಾಗೂ ಚರ್ಚೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬ ನಿಲುವಿಗೆ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಅವರ ನಿಲುವಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್ ಕ್ರಮಗಳ ಬಗ್ಗೆ ಮೌನ ವಹಿಸುವ ಮೂಲಕ ಭಾರತವು ಜಾಗತಿಕ ಸಾರ್ವಜನಿಕ ಅಭಿಪ್ರಾಯದಿಂದ ದೂರ ಸರಿದಿದೆ ಎಂದು ಖರ್ಗೆ ಪುನರುಚ್ಚರಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತದ ರಾಷ್ಟ್ರೀಯತೆಯ ಹೆಮ್ಮೆಯು ನವದೆಹಲಿಯು ಪ್ಯಾಲೆಸ್ತೀನ್ ಪರವಾಗಿ ಧ್ವನಿ ಎತ್ತುವುದನ್ನು ಬಯಸುತ್ತದೆ. ತಮ್ಮ ಸಂಪಾದಕೀಯ ಲೇಖನದ ಮೂಲಕ ಸೋನಿಯಾ ಗಾಂಧಿ ಅವರು ಭಾರತವು ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಮರಳಿ ಪಡೆಯಲು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಗಾಜಾ ವಿಷಯದಲ್ಲಿ ನೈತಿಕ ಸ್ಪಷ್ಟತೆಯೊಂದಿಗೆ ಧ್ವನಿ ಎತ್ತಲು ಕರೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.