ಮುಂಬೈ : ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಶಿಬ್ಪುರದಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆಸಿ ಮುಂಬೈಗೆ ಪರಾರಿಯಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂವರು ನಾಯಕರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಮೀಮ್ ಅಹಮದ್, ಜಮೀಲ್ ಅಖ್ತರ್ ಮತ್ತು ಅಫ್ತಾಬ್ ಅನ್ವರ್ ಎಂದು ಗುರುತಿಸಲಾಗಿದೆ. ಈ ಪೈಕಿ ಮೊದಲನೇ ಆರೋಪಿ ಶಮೀಮ್ ಅಹಮದ್, ಟಿಎಂಸಿ ಪಕ್ಷದ ಹಾಲಿ ಕೌನ್ಸಿಲರ್ ಶಮೀಮ ಬಾನೋ ಅವರ ಪತಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದ ನಂತರ ಹೌರಾದ ಶಿಬ್ಪುರದಲ್ಲಿ ತೀವ್ರ ಗಲಬೆಗಳು ನಡೆದಿದ್ದವು. ಈ ವೇಳೆ ಬಿಜೆಪಿಯ ವಿಜಯೋತ್ಸವದ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಈ ಆರೋಪಿಗಳು ಬಾಂಬ್ ಎಸೆದು, ಗುಂಡಿನ ದಾಳಿ ನಡೆಸಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದ್ದರು. ಘಟನೆಯ ನಂತರ ಪಶ್ಚಿಮ ಬಂಗಾಳದಿಂದ ತಲೆಮರೆಸಿಕೊಂಡಿದ್ದ ಇವರು ಒಡಿಶಾ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸಿದ್ದರು.
ಆರೋಪಿಗಳ ಪತ್ತೆಗಾಗಿ ಪಶ್ಚಿಮ ಬಂಗಾಳ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರೂ ಇವರ ಸುಳಿವು ಸಿಕ್ಕಿರಲಿಲ್ಲ. ಮುಂಬೈನಲ್ಲಿ ಪದೇ ಪದೇ ತಮ್ಮ ವಾಸ್ತವ್ಯದ ಸ್ಥಳಗಳನ್ನು ಬದಲಾಯಿಸುತ್ತಿದ್ದ ಇವರು, ಅಜ್ಮೀರ್ಗೆ ಓಡಿಹೋಗಲು ಸಂಚು ರೂಪಿಸುತ್ತಿದ್ದರು. ಆದರೆ ಮುಂಬೈನ ದೇವ್ನಾರ್ ಪ್ರದೇಶದಲ್ಲಿ ಇವರು ಅಡಗಿರುವ ಬಗ್ಗೆ ನಿಖರ ಮಾಹಿತಿ ಪಡೆದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಸೆರೆಹಿಡಿದಿದ್ದಾರೆ. ಪ್ರಸ್ತುತ ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳಿಗಾಗಿ ಕೊಲ್ಕತ್ತಾ (ಹೌರಾ) ಪೊಲೀಸರಿಗೆ ಹಸ್ತಾಂತರಿಸಲಾಗಿದೆ.