ನವದೆಹಲಿ : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಶನಿವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, 'ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟಬಲ್ ರೀ-ಎಂಟ್ರಿ ವೆಹಿಕಲ್' (MIRV) ತಂತ್ರಜ್ಞಾನ ಹೊಂದಿದ ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಈ 'ಮಿಷನ್ ದಿವ್ಯಾಸ್ತ್ರ' ಪರೀಕ್ಷೆಯ ಮೂಲಕ ಭಾರತವು ಒಂದೇ ಕ್ಷಿಪಣಿಯ ಸಹಾಯದಿಂದ ಶತ್ರುಪಾಳೆಯದ ವಿವಿಧ ಗುರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಬಲ್ಲ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ಒಂದು ಕ್ಷಿಪಣಿ ಕೇವಲ ಒಂದು ಸಿಡಿತಲೆಯನ್ನು ಹೊತ್ತೊಯ್ದರೆ, ಎಂಐಆರ್ವಿ ತಂತ್ರಜ್ಞಾನದ ವಿಶೇಷತೆಯಿಂದಾಗಿ ಅಗ್ನಿ-5 ಈಗ ನಾಲ್ಕರಿಂದ ಐದು ಪರಮಾಣು ಸಿಡಿತಲೆಗಳನ್ನು ಹೊತ್ತು ಸಾಗಬಲ್ಲದು ಮತ್ತು ನೂರಾರು ಕಿಲೋಮೀಟರ್ ದೂರದಲ್ಲಿ ಹರಡಿರುವ ಬೇರೆ ಬೇರೆ ಗುರಿಗಳನ್ನು ಏಕಕಾಲದಲ್ಲಿ ನಿಖರವಾಗಿ ಧ್ವಂಸಗೊಳಿಸಬಲ್ಲದು.
ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆಗೊಂಡ ಈ ಕ್ಷಿಪಣಿಯು ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿದ್ದ ನಿಗದಿತ ಗುರಿಗಳನ್ನು ಅಚ್ಚುಕಟ್ಟಾಗಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ಖಚಿತಪಡಿಸಿದೆ. ಈ ಮಹತ್ವದ ಯೋಜನೆಯ ನೇತೃತ್ವವನ್ನು ಡಿಆರ್ಡಿಒದ ಮಹಿಳಾ ವಿಜ್ಞಾನಿಗಳ ತಂಡ ವಹಿಸಿರುವುದು ದೇಶದ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ. 5,000 ಕಿಲೋಮೀಟರ್ಗಿಂತಲೂ ಹೆಚ್ಚಿನ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯು, ಭಾರತವನ್ನು ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳನ್ನೊಳಗೊಂಡ ಅತ್ಯಾಧುನಿಕ ತಂತ್ರಜ್ಞಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದೆ.
ಭಾರತವು 'ಯಾವುದೇ ದೇಶದ ಮೇಲೆ ಮೊದಲು ಪರಮಾಣು ದಾಳಿ ನಡೆಸುವುದಿಲ್ಲ' (No First Use) ಎಂಬ ನೀತಿಗೆ ಬದ್ಧವಾಗಿದ್ದರೂ, ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದಿಂದ ಎದುರಾಗಬಹುದಾದ ಬೆದರಿಕೆಗಳನ್ನು ಹತ್ತಿಕ್ಕಲು ಈ ಸಾಮರ್ಥ್ಯ ಅನಿವಾರ್ಯವಾಗಿದೆ. ಸಿಪ್ರಿ ವರದಿಗಳ ಪ್ರಕಾರ ಭಾರತವು ಸದ್ಯ 180 ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, ಪಾಕಿಸ್ತಾನಕ್ಕಿಂತ (170) ಮುಂದಿದೆ. ಚೀನಾದ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಪ್ರಬಲ ಪೈಪೋಟಿ ನೀಡಲು ಈ ಹೊಸ ತಂತ್ರಜ್ಞಾನವು ಭಾರತದ 'ನ್ಯೂಕ್ಲಿಯರ್ ಟ್ರೈಯಾಡ್' ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. ಇತ್ತೀಚೆಗಷ್ಟೇ ನೌಕಾಪಡೆಗೆ ಸೇರಿದ ಐಎನ್ಎಸ್ ಅರಿದಮನ್ ಜಲಾಂತರ್ಗಾಮಿಯೊಂದಿಗೆ ಅಗ್ನಿ-5 ರ ಸೇರ್ಪಡೆಯು ಭಾರತದ ವ್ಯೂಹಾತ್ಮಕ ಸನ್ನದ್ಧತೆಯನ್ನು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.