ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದ್ದು, ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ಭಾಷಣ ಮಾಡಿದ ವಿಜಯ್, "ಈ ಗೆಲುವು ನನ್ನ ವೈಯಕ್ತಿಕ ಸಾಧನೆಯಲ್ಲ, ಬದಲಾಗಿ ಇದು ತಮಿಳುನಾಡಿನ ಎಂಟು ಕೋಟಿ ಜನತೆಯ ಜಯ," ಎಂದು ಭಾವನಾತ್ಮಕವಾಗಿ ನುಡಿದರು.
ಪದಗ್ರಹಣದ ಬೆನ್ನಲ್ಲೇ ಪ್ರಣಾಳಿಕೆಯ ಮೊದಲ ಭರವಸೆಯ ಕಡತಕ್ಕೆ ಸಹಿ ಹಾಕಿದ ಅವರು, ಜನರ ಮುಂದಿಟ್ಟಿರುವ ಪ್ರತಿಯೊಂದು ಗ್ಯಾರಂಟಿಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. "ಹಿಂದಿನ ಸ್ಟಾಲಿನ್ ನೇತೃತ್ವದ ಸರ್ಕಾರವು ರಾಜ್ಯದ ಖಜಾನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದು, ತಮಿಳುನಾಡಿನ ಮೇಲೆ 10 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಸಾಲದ ಹೊರೆಯನ್ನು ಹೊರಿಸಿದೆ. ರಾಜ್ಯದ ಆರ್ಥಿಕ ಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ಚೇತರಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ," ಎಂದು ಘೋಷಿಸಿದರು.
"ತಮಿಳುನಾಡಿನಲ್ಲಿ ಇಂದಿನಿಂದ ಹೊಸ ಯುಗ ಆರಂಭವಾಗಿದೆ. ನಿಮ್ಮ ತೆರಿಗೆಯ ಒಂದು ರೂಪಾಯಿಯನ್ನೂ ಲೂಟಿ ಹೊಡೆಯಲು ನಾನು ಬಿಡುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನನ್ನ ಗುರಿ. ಕೊಟ್ಟಿರುವ ಭರವಸೆಗಳನ್ನು ಪೂರೈಸಲು ನನಗೆ ಸ್ವಲ್ಪ ಕಾಲಾವಕಾಶ ನೀಡಿ," ಎಂದು ಜನರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಮಗೆ ಬೆಂಬಲ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಮಿತ್ರಪಕ್ಷಗಳ ನಾಯಕರಿಗೆ ವಿಜಯ್ ಧನ್ಯವಾದ ಅರ್ಪಿಸಿದರು. ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಕ್ರೀಡಾಂಗಣವು ಹೊಸ ನಾಯಕನ ಸ್ವಾಗತಕ್ಕೆ ಸಾಕ್ಷಿಯಾಯಿತು.