ನವದೆಹಲಿ : ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಆರ್ಎಸ್ಎಸ್ನೊಂದಿಗೆ ಸಂಯೋಜಿತ ವಕೀಲರ ಸಂಸ್ಥೆಯಾದ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಾಲ್ಕು ಬಾರಿ ಭಾಗವಹಿಸಿದ್ದರು ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ನ್ಯಾ. ಸ್ವರ್ಣ ಕಾಂತ ಶರ್ಮಾ ಅವರು ಆರ್ಎಸ್ಎಸ್ ಮತ್ತು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಅವರು ಈ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಶರ್ಮಾ ಅವರನ್ನು ಹಿಂತೆಗೆದುಕೊಳ್ಳಬೇಕೆಂದು ಕೇಜ್ರಿವಾಲ್ ಕೋರಿದ್ದಾರೆ. ಈ ಪ್ರಕರಣದ ವಿಚಾರಣೆಯು ತಮ್ಮ ಮುಂದೆ ನಿಷ್ಪಕ್ಷಪಾತವಾಗಿರುವುದಿಲ್ಲ ಎಂಬ ಗಂಭೀರ, ಪ್ರಾಮಾಣಿಕ ಮತ್ತು ಸಮಂಜಸವಾದ ಆತಂಕವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಂದು ವೇಳೆ ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ವಿರೋಧ ಸಿದ್ಧಾಂತದ ವ್ಯಕ್ತಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಕೇಳಿದ್ದಾರೆ.
ನಾನು ಆರ್ಎಸ್ಎಸ್ ಸಿದ್ಧಾಂತಕ್ಕೆ ವಿರುದ್ಧವಾದ ರಾಜಕೀಯ ಪಕ್ಷದಲ್ಲಿದ್ದೇನೆ. ಹಾಗಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನ್ಯಾಯಮೂರ್ತಿಗಳಿಂದ ನನಗೆ ನಿಷ್ಪಕ್ಷಪಾತ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ವಿಚಾರಣೆ ಮುಗಿಯುವ ಮುನ್ನವೇ ನ್ಯಾಯಾಲಯವು ನನ್ನನ್ನು 'ದೋಷಿ' ಅಥವಾ 'ಭ್ರಷ್ಟ' ಎಂಬಂತೆ ಪರಿಗಣಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಅವರು ವಾದಿಸಿದರು. ಕೇಜ್ರಿವಾಲ್ ಅವರ ಈ ಮನವಿಯನ್ನು ಸಿಬಿಐ ವಿಷಾದನೀಯ ಎಂದು ಕರೆದಿದೆ. ನ್ಯಾಯಾಧೀಶರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಾತ್ರಕ್ಕೆ ಅವರು ಪಕ್ಷಪಾತಿಗಳಾಗುವುದಿಲ್ಲ ಎಂದು ಸಿಬಿಐ ಪರ ವಕೀಲರು ವಾದಿಸಿದ್ದಾರೆ. ಕೇಜ್ರಿವಾಲ್ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಚಾರಣೆಯಿಂದ ಹಿಂದೆ ಸರಿಯುವಂತೆ ಅರ್ಜಿ ಸಲ್ಲಿಕೆಯಾಗಿದೆ. ನಾನು ಈಗ ಕೇವಲ ಹಿಂದೆ ಸರಿಯುವ ಅರ್ಜಿಯ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತಿದ್ದೇನೆ. ಪ್ರಕರಣದ ಗುಣದೋಷಗಳ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು. ವಾದ ಆಲಿಸಿದ ನಂತರ ಕೇಜ್ರಿವಾಲ್ ಅವರ ಮನವಿಗೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿದ್ದಾರೆ.