ನವದೆಹಲಿ : ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ ಮತದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೇ ಸ್ವೀಕರಿಸಲು ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡಿರುವ ದ್ವಿಸದಸ್ಯರ ಪೀಠ, ಅಸಮಾಧಾನಗೊಂಡ ಪಕ್ಷಗಳಿಗೆ ಈಗಾಗಲೇ ಸ್ಥಾಪಿತವಾಗಿರುವ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಸೂಚಿಸಿದೆ. ಈ ಅರ್ಜಿಯನ್ನು "ಅಕಾಲಿಕ" ಎಂದು ಅಭಿಪ್ರಾಯಪಟ್ಟಿದೆ.
"ಅರ್ಜಿದಾರರು (ಕ್ವರೈಶಾ ಯಾಸ್ಮಿನ್ ಮತ್ತು ಇತರರು) ಈಗಾಗಲೇ ಅಪೀಲು ನ್ಯಾಯಮಂಡಳಿಗಳ ಮೊರೆ ಹೋಗಿರುವುದರಿಂದ, ನಮ್ಮ ಅಭಿಪ್ರಾಯದಲ್ಲಿ ಅರ್ಜಿಯಲ್ಲಿ ವ್ಯಕ್ತಪಡಿಸಿರುವ ಆತಂಕಗಳು ಅಕಾಲಿಕವಾಗಿದೆ. ಈ ಅರ್ಜಿಯನ್ನು ಅನುಮೋದಿಸಿದರೆ, ಅಗತ್ಯವಾದ ಪರಿಣಾಮಗಳು ಸ್ವಯಂಪ್ರೇರಿತವಾಗಿ ಉಂಟಾಗುತ್ತವೆ," ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದ್ದು, ಅರ್ಜಿಯ ತಾತ್ವಿಕ ಅಂಶಗಳ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ವಿವಾದಾತ್ಮಕ SIR ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಸುಮಾರು 34 ಲಕ್ಷ ಮನವಿಗಳು ಪ್ರಸ್ತುತ ವಿವಿಧ ನ್ಯಾಯಮಂಡಳಿಗಳ ಮುಂದೆ ಬಾಕಿ ಇವೆ. ಈ ಅರ್ಜಿಗಳನ್ನು ತೀರ್ಮಾನಿಸಲು, ಕೊಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರು ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 19 ನ್ಯಾಯಮಂಡಳಿಗಳನ್ನು ರಚಿಸಿದ್ದಾರೆ.