ಕೋಲ್ಕತಾ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಗಂಟೆಗಟ್ಟಲೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಡಳಿತಾರೂಢ ಟಿಎಂಸಿಗೆ ಭಾನುವಾರ ಚಾಟಿ ಬೀಸಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿ ಆಳ್ವಿಕೆಯಲ್ಲಿ ರಾಜ್ಯ ಮಹಾ ಜಂಗಲ್ರಾಜ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೋಚ್ ಬೆಹಾರ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ನಡೆಸಿ ಮಾತನಾಡಿದ ಅವರು, 'ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಹೇಗೆ ಒತ್ತೆಯಾಳುಗಳಾಗಿ ಇರಿಸಲಾಯಿತು ಎಂಬುದನ್ನು ಇಡೀ ದೇಶವೇ ನೋಡಿದೆ. ಇಂತಹ ಸರ್ಕಾರ ಬಂಗಾಳದ ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಂಗ ಅಧಿಕಾರಿಗಳೇ ಸುರಕ್ಷಿತವಾಗಿಲ್ಲದಿದ್ದರೆ, ಟಿಎಂಸಿ ಆಳ್ವಿಕೆಯಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿರುತ್ತಾರೆ ಎಂದು ಹೇಗೆ ತಾನೇ ನಂಬಬಹುದು? ಮಾಲ್ಡಾದಲ್ಲಿ ನಡೆದದ್ದು ಟಿಎಂಸಿಯ ಮಹಾ ಜಂಗಲ್ರಾಜ್ಗೆ ಒಂದು ಉದಾಹರಣೆ' ಎಂದು ಹರಿಹಾಯ್ದರು.