image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿಕಸಿತ ಭಾರತಕ್ಕೆ ಅಂಗನವಾಡಿಗಳ ಬಲವರ್ಧನೆ ಅಗತ್ಯ: ಲೋಕಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ವಿಕಸಿತ ಭಾರತಕ್ಕೆ ಅಂಗನವಾಡಿಗಳ ಬಲವರ್ಧನೆ ಅಗತ್ಯ: ಲೋಕಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ನವದೆಹಲಿ: 'ವಿಕಸಿತ ಭಾರತ 2047'ರ ಕನಸನ್ನು ನನಸಾಗಿಸಲು ಸದೃಢ ಯುವ ಪೀಳಿಗೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿಗಳ ಬಲವರ್ಧನೆ ಹಾಗೂ ಎಳೆಯ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ಲೋಕಸಭೆಯ ನಿಯಮ 377ರ ಅಡಿಯಲ್ಲಿ ಈ ಮಹತ್ವದ ವಿಷಯವನ್ನು ಪ್ರಸ್ತಾಪಿಸಿದ ಅವರು, ದೇಶದ ಭವಿಷ್ಯದ ದೃಷ್ಟಿಯಿಂದ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಮಕ್ಕಳ ಮಾನಸಿಕ ಸವಾಲುಗಳನ್ನು ಗುರುತಿಸುವುದು ಅನಿವಾರ್ಯ ಎಂದರು. ಭಾರತದಲ್ಲಿ 0-6 ವರ್ಷ ವಯಸ್ಸಿನ ಸುಮಾರು 16.5 ಕೋಟಿಗೂ ಹೆಚ್ಚು ಮಕ್ಕಳಿದ್ದು, ಅವರಲ್ಲಿ ಹೆಚ್ಚಿನವರು ಅಂಗನವಾಡಿ ಹಾಗೂ ಆರಂಭಿಕ ಕಲಿಕಾ ಕೇಂದ್ರಗಳನ್ನು ಅವಲಂಬಿಸಿದ್ದಾರೆ. ಮಗುವಿನ ಮೆದುಳಿನ ಶೇ. 85ರಷ್ಟು ಬೆಳವಣಿಗೆ ಆರು ವರ್ಷದ ಒಳಗೇ ನಡೆಯುವುದರಿಂದ, ಈ ಹಂತದ ಆರೈಕೆ ಮತ್ತು ಶಿಕ್ಷಣ (ECCE) ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು.

​ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ADHD (ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್) ಮತ್ತು ಡಿಸ್ಲೆಕ್ಸಿಯಾದಂತಹ ಕಲಿಕಾ ನ್ಯೂನತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು, ಪ್ರತಿ ಏಳು ಮಕ್ಕಳಲ್ಲಿ ಒಬ್ಬರು ಮಾನಸಿಕ ತೊಂದರೆ ಎದುರಿಸುತ್ತಿದ್ದಾರೆ ಎಂಬ ಅಂಕಿ-ಅಂಶಗಳನ್ನು ಸದನದ ಗಮನಕ್ಕೆ ತಂದರು. ಈ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಲ್ಲಿ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವಲ್ಲಿ ನಮ್ಮ ವ್ಯವಸ್ಥೆ ಇನ್ನೂ ಹಿಂದುಳಿದಿದೆ ಎಂದು ಅವರು ವಿಷಾದಿಸಿದರು. ಈ ಸವಾಲುಗಳನ್ನು ಎದುರಿಸಲು ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಮುಂಚೂಣಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಬೇಕು ಅಥವಾ ತರಬೇತಿ ಪಡೆದ ಆಪ್ತ ಸಮಾಲೋಚಕರನ್ನು ನೇಮಿಸಬೇಕು ಎಂದು ಚೌಟ ಅವರು ಸಲಹೆ ನೀಡಿದರು. ಈ ಮೂಲಕ ಮಕ್ಕಳ ಭಾವನಾತ್ಮಕ ಸವಾಲುಗಳನ್ನು ಮೊದಲೇ ಗುರುತಿಸಿ, ಅಗತ್ಯವಿದ್ದಲ್ಲಿ ತಜ್ಞರಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತದೆ.

​ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಹೂಡಿಕೆ ಮಾಡುವುದು ಕೇವಲ ಸಾಮಾಜಿಕ ಜವಾಬ್ದಾರಿಯಲ್ಲ, ಬದಲಿಗೆ ಇದು ದೇಶದ ಆರ್ಥಿಕ ಅಗತ್ಯವೂ ಆಗಿದೆ. ಎಳೆಯ ವಯಸ್ಸಿನಲ್ಲೇ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿದರೆ ಮುಂದಿನ ಪೀಳಿಗೆ ಗಂಭೀರ ಅಪಾಯ ಎದುರಿಸಬೇಕಾಗುತ್ತದೆ. ಆದ್ದರಿಂದ ವಿಕಸಿತ ಭಾರತದ ಗುರಿ ತಲುಪಲು ಆರೋಗ್ಯವಂತ ಮತ್ತು ಸಮರ್ಥ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಬಾಲ್ಯದ ಆರೈಕೆಯಲ್ಲಿ ಮಾನಸಿಕ ಆರೋಗ್ಯದ ಅರಿವನ್ನು ಸಂಯೋಜಿಸುವುದು ಅತ್ಯಗತ್ಯ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ