ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆಯ ನಡುವೆ ಭಾರತದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬಿಗ್ ರಿಲೀಫ್ ಕೊಟ್ಟಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ. ನಮ್ಮ ದೇಶಕ್ಕೆ ಬೇಕಾಗುವ ಅಡುಗೆ ಅನಿಲದ ಶೇ. 60ರಷ್ಟನ್ನು ನಾವು ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತೇವೆ. ಆದರೂ, ಈ ಯುದ್ಧದ ಟೆನ್ಷನ್ ನಡುವೆಯೂ ಮನೆಮನೆಗೆ ಗ್ಯಾಸ್ ಆಗಲಿ, ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಆಗಲಿ ಯಾವುದೇ ಅಡೆತಡೆಯಿಲ್ಲದೆ ಸರಬರಾಜು ಆಗುವಂತೆ ನಾವು ಪಕ್ಕಾ ಪ್ಲಾನ್ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಗುಡುಗಿದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಇಂಧನ ಆಮದು ಭಾರಿ ಬದಲಾವಣೆ ಕಂಡಿದೆ. ಮೊದಲೆಲ್ಲಾ ಕೇವಲ 27 ದೇಶಗಳಿಂದ ಮಾತ್ರ ಕಚ್ಚಾ ತೈಲ ತರಿಸಿಕೊಳ್ಳುತ್ತಿದ್ದೆವು, ಆದರೆ ಈಗ ಆ ಸಂಖ್ಯೆ 41ಕ್ಕೆ ಏರಿದೆ. ಒಂದೆಡೆ ಯುದ್ಧ ನಡೆಯುತ್ತಿದ್ದರೆ, ನಾವು ಬೇರೆ ಬೇರೆ ದೇಶಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ತೈಲ, ಅನಿಲ ಮತ್ತು ರಸಗೊಬ್ಬರಗಳನ್ನು ಸೇಫ್ ಆಗಿ ತರಿಸಿಕೊಳ್ಳುತ್ತಿದ್ದೇವೆ ಎಂದು ಮೋದಿ ಮಾಹಿತಿ ನೀಡಿದರು. ಭಾರತದ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (SPR) ಎಂದರೆ ಆಪತ್ಕಾಲದ ತೈಲ ಸಂಗ್ರಹ ಈಗ ಬರೋಬ್ಬರಿ 5.3 ಮಿಲಿಯನ್ ಟನ್ ದಾಟಿದೆ. ಇದನ್ನು 6.5 ಮಿಲಿಯನ್ ಟನ್ಗೆ ಹೆಚ್ಚಿಸುವ ಕೆಲಸ ಭರದಿಂದ ಸಾಗುತ್ತಿದೆ. ತೈಲ ಕಂಪನಿಗಳ ಬಳಿಯೂ ತಮ್ಮದೇ ಆದ ದೊಡ್ಡ ಸ್ಟಾಕ್ ಇದೆ. ಹೀಗಾಗಿ ಎಂಥದ್ದೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಫುಲ್ ರೆಡಿ ಇದ್ದೇವೆ ಎಂದು ಅಭಯ ನೀಡಿದರು.
ಹಾರ್ಮುಜ್ ಜಲಸಂಧಿಯ ಡೇಂಜರ್ ಝೋನ್ನಲ್ಲಿ ಸಿಲುಕಿಕೊಂಡಿದ್ದ ನಮ್ಮ ಭಾರತೀಯ ಹಡಗುಗಳನ್ನು ಸೇಫ್ ಆಗಿ ತಾಯ್ನಾಡಿಗೆ ಕರೆತರಲಾಗಿದೆ. ದೇಶದ ಇಂಧನ ಭದ್ರತೆಗೆ ಯಾವುದೇ ಕುತ್ತು ಬರದಂತೆ ಪ್ರತಿಯೊಂದು ಹಂತದಲ್ಲೂ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಪಶ್ಚಿಮ ಏಷ್ಯಾದ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಅಲ್ಲಿ ನಮ್ಮ 10 ಮಿಲಿಯನ್ಗಿಂತ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ ಎಂದರು. ಯುದ್ಧ ಶುರುವಾದಾಗಿನಿಂದ, ಇರಾನ್ನಿಂದ 1,000 ಸೇರಿದಂತೆ ಒಟ್ಟು 3.75 ಲಕ್ಷ ಭಾರತೀಯರನ್ನು ಸೇಫ್ ಆಗಿ ಕರೆತರಲಾಗಿದೆ. ಆದರೆ, ದುರದೃಷ್ಟವಶಾತ್ ಕೆಲವರು ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಕಂಬನಿ ಮಿಡಿದರು. ಸಂಕಷ್ಟದಲ್ಲಿರುವ ನಮ್ಮವರಿಗಾಗಿ 24 ಗಂಟೆಯೂ ಸಹಾಯವಾಣಿ ಕೆಲಸ ಮಾಡುತ್ತಿದೆ. ಈ ಬಿಕ್ಕಟ್ಟು ಬಗೆಹರಿಸಲು ಪಶ್ಚಿಮ ಏಷ್ಯಾದ ನಾಯಕರ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ. ದೇಶದ ಭದ್ರತೆ, ಆರ್ಥಿಕತೆ ಹಾಗೂ ಇಂಧನ ಪೂರೈಕೆಯ ವಿಚಾರದಲ್ಲಿ ಸಂಸತ್ತಿನ ಎಲ್ಲರೂ ಒಗ್ಗಟ್ಟಿನಿಂದ ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಪ್ರಧಾನಿ ಮೋದಿ ಸದನಕ್ಕೆ ಮನವಿ ಮಾಡಿದರು.