ನವದೆಹಲಿ : ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೈವನ್ ಅಜಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಮತ್ತು ನಂತರ ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸಿದ ಸೈನಿಕ ಕಾರ್ಯಾಚರಣೆಗಳ ಸಮಯದ ಬಗ್ಗೆ ಹರಡುತ್ತಿರುವ ಅನುಮಾನಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಫೆಬ್ರವರಿ ಕೊನೆ ವಾರದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉನ್ನತ ಮಟ್ಟದ ರಾಜತಾಂತ್ರಿಕ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಪ್ರಾದೇಶಿಕ ಪರಿಸ್ಥಿತಿ ಈಗಾಗಲೇ ಅಸ್ಥಿರವಾಗಿತ್ತು ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ (ಫೆಬ್ರವರಿ 25-26, 2026ರಂದು) ಇಸ್ರೇಲ್ ಗೆ ಬರುವ ಮುನ್ನವೇ ನಮ್ಮ ಪ್ರದೇಶದ ಪರಿಸ್ಥಿತಿ ಬಹಳ ಅಸ್ಥಿರವಾಗಿದೆ ಎಂಬುದು ಸ್ಪಷ್ಟವಾಗಿತ್ತು ಎಂದು ಅಜಾರ್ ಹೇಳಿದ್ದಾರೆ. ಇರಾನ್ ಮೇಲೆ ದಾಳಿ ನಡೆಸುವ ನಿರ್ಧಾರವು ಪ್ರಧಾನಿ ಮೋದಿ ಅವರ ಭೇಟಿಯೊಂದಿಗೆ ಸಂಬಂಧಪಟ್ಟದ್ದಲ್ಲ, ಅದು ಸಂಪೂರ್ಣವಾಗಿ ತಂತ್ರಾತ್ಮಕ ಪರಿಸ್ಥಿತಿಯ ಆಧಾರದ ಮೇಲೆ ತೆಗೆದುಕೊಳ್ಳಲಾಯಿತು ಎಂದು ಅವರು ವಿವರಿಸಿದರು. ದಾಳಿ ನಡೆಸುವ ನಿರ್ಧಾರಕ್ಕೆ ಬಂದಾಗ, ಕಾರ್ಯಾಚರಣೆಗೆ ಬೇಕಾದ ಅವಕಾಶ ಪ್ರಧಾನಿ ಮೋದಿ ತೆರಳಿದ ನಂತರವೇ ದೊರೆಯಿತು ಎಂದು ಅವರು ಹೇಳಿದರು.
ಈ ಘಟನೆಗಳು ಒಂದೇ ಸಮಯದಲ್ಲಿ ಯೋಜಿತವಾಗಿದ್ದವು ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದರು. ದಾಳಿಗೆ ಅಧಿಕೃತ ಅನುಮೋದನೆ ಕೂಡ ಪ್ರಧಾನಿ ಮೋದಿ ಇಸ್ರೇಲ್ ತೊರೆದ ಬಳಿಕವೇ ನೀಡಲಾಯಿತು ಎಂದು ಅವರು ಹೇಳಿದರು. ಅಜಾರ್ ಅವರ ಪ್ರಕಾರ, ಕಾರ್ಯಾಚರಣೆಗೆ ಸಚಿವ ಸಂಪುಟದಿಂದ ಅನುಮೋದನೆ ದೊರಕಿದ್ದು ಮೋದಿ ಅವರ ಪ್ರಯಾಣ ಮುಗಿದ ಎರಡು ದಿನಗಳ ಬಳಿಕವಷ್ಟೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಸ್ತುತ ನಡೆಯುತ್ತಿರುವ ಸೈನಿಕ ಕ್ರಮಗಳ ದೀರ್ಘಕಾಲೀನ ಉದ್ದೇಶಗಳನ್ನೂ ವಿವರಿಸಿದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಆಕ್ರಮಣ ಮಾಡುವ ಉದ್ದೇಶ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇರಾನ್ ಜನರು ತಮ್ಮ ದೇಶದ ನೀತಿ ಅಥವಾ ಆಡಳಿತದಲ್ಲಿ ಬದಲಾವಣೆ ತರಲು ಒತ್ತಡ ಹಾಕುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸಲು ಬಯಸುತ್ತೇವೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚು ಸ್ಥಿರತೆ ಮತ್ತು ಭದ್ರತೆ ನಿರ್ಮಾಣವಾಗುವುದು ಮುಖ್ಯ ಗುರಿ ಎಂದು ಅವರು ಹೇಳಿದರು. ಇಂತಹ ಸ್ಥಿರತೆ ಪಶ್ಚಿಮ ಏಷ್ಯಾ ಪ್ರದೇಶದ ರಾಷ್ಟ್ರಗಳಿಗೂ ಹಾಗೂ ಜಾಗತಿಕ ಸಮುದಾಯಕ್ಕೂ ಲಾಭಕರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.