ಕೊಲ್ಲಂ : ಕೇರಳದಲ್ಲಿ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೀಪ ಬೆಳಗಲು ಹೊರಟಾಗ ಕೆಸಿ ವೇಣುಗೋಪಾಲ್ ಚಪ್ಪಲಿ ತೆಗೆಯಲು ಸೂಚಿಸಿದ ಘಟನೆ ನಡೆದಿದೆ. ಕೇರಳದಲ್ಲಿ ನಿನ್ನೆ ಶಿವಗಿರಿ ಮಠಕ್ಕೆ ಮಹಾತ್ಮಾ ಗಾಂಧೀಜಿ ಭೇಟಿ ನೀಡಿ 100 ವರ್ಷಗಳಾದ ಹಿನ್ನಲೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಾಗಿ ಹೋಗಿದ್ದರು. ವೇದಿಕೆಯಲ್ಲಿ ಸಾಕಷ್ಟು ಸ್ವಾಮೀಜಿಗಳು, ಗಣ್ಯರೂ ಇದ್ದರು.
ಕಾರ್ಯಕ್ರಮದ ಉದ್ಘಾಟನೆ ವೇಳೆ ದೀಪ ಬೆಳಗುವ ಕಾರ್ಯಕ್ರಮವಿತ್ತು. ರಾಹುಲ್ ಗಾಂಧಿಗೆ ದೀಪ ಬೆಳಗಲು ಕ್ಯಾಂಡಲ್ ನೀಡಿದಾಗ ಅವರು ಚಪ್ಪಲಿ ಧರಿಸಿದ್ದರು. ಹೀಗಾಗಿ ತಕ್ಷಣವೇ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಚಪ್ಪಲಿ ತೆಗೆದು ದೀಪ ಬೆಳಗುವಂತೆ ಸೂಚಿಸಿದ್ದಾರೆ. ಹೀಗಾಗಿ ತಕ್ಷಣವೇ ಇದನ್ನು ಅರಿತುಕೊಂಡ ರಾಹುಲ್ ಗಾಂಧಿ ಚಪ್ಪಲಿ ತೆಗೆದು ದೀಪ ಬೆಳಗಿದ್ದಾರೆ. ನಿನ್ನೆ ಕೇರಳಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದರು.