ನವದೆಹಲಿ : 'ಆಪರೇಷನ್ ಸಿಂಧೂರ' ಸಮಯದಲ್ಲಿ ಭಾರತವು ಪಾಕಿಸ್ತಾನದ ಕಿರಣಾ ಹಿಲ್ಸ್ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದೆ ಎಂದು ವಾಯುಯಾನ ಇತಿಹಾಸಕಾರ ಮತ್ತು ವಿಶ್ಲೇಷಕ ಟಾಮ್ ಕೂಪರ್ ಅವರು ಪ್ರತಿಪಾದಿಸಿದ್ದಾರೆ. ಮಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕೂಪರ್ ಅವರ ಪ್ರಕಾರ, ಈ ದಾಳಿಯು ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರದೆ, ಪಾಕಿಸ್ತಾನಕ್ಕೆ ನೀಡಿದ ಬಲವಾದ ಕಾರ್ಯತಂತ್ರದ ಸಂದೇಶವಾಗಿತ್ತು. "ಹೆಚ್ಚಿನ ಹಾನಿ ಮಾಡದೆಯೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲು ಇಂತಹ ಸ್ಥಳವನ್ನು ಆರಿಸಿಕೊಳ್ಳಲಾಗುತ್ತದೆ. 'ನೋಡಿ, ನಾವು ನಿಮ್ಮನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಗುರಿಯಾಗಿಸಬಹುದು, ಆದ್ದರಿಂದ ನಿಮ್ಮ ಕುತಂತ್ರಗಳನ್ನು ನಿಲ್ಲಿಸಿ' ಎಂದು ಹೇಳುವುದು ಇದರ ಉದ್ದೇಶವಾಗಿತ್ತು" ಎಂದು ಅವರು ವಿವರಿಸಿದ್ದಾರೆ. ದಾಳಿಯ ಕುರಿತು ಭಾರತೀಯ ವಾಯುಸೇನೆ (IAF) ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ, "ನಮಗೆ ಇದರ ಬಗ್ಗೆ ತಿಳಿದಿಲ್ಲ, ಈ ವೀಡಿಯೊಗಳನ್ನು ಅವರೇ ಸೃಷ್ಟಿಸಿರಬಹುದು" ಎಂದು ಉತ್ತರಿಸಿದ್ದರು. ವಾಯುಸೇನೆಯ ಈ ನಿಗೂಢ ನಡೆಯನ್ನು ಕೂಪರ್ ಟೀಕಿಸಿದ್ದಾರೆ.
ತಮ್ಮ ವಾದಕ್ಕೆ ಪೂರಕವಾಗಿ ಕೂಪರ್ ಕೆಲವು ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ. ಬೆಟ್ಟದ ಕಡೆಗೆ ಕ್ಷಿಪಣಿಗಳು ನುಗ್ಗುತ್ತಿರುವ ವೀಡಿಯೊಗಳು ಲಭ್ಯವಿವೆ. ಪಾಕಿಸ್ತಾನ ವಾಯುಸೇನೆಯ 4091ನೇ ಸ್ಕ್ವಾಡ್ರನ್ನ ರೇಡಾರ್ ಸ್ಟೇಷನ್ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಭಾರತವು ಮೊದಲು ರೇಡಾರ್ ವ್ಯವಸ್ಥೆಯನ್ನು ಧ್ವಂಸಗೊಳಿಸಿ, ನಂತರ ಭೂಗತ ಶೇಖರಣಾ ಕೇಂದ್ರಗಳ ಪ್ರವೇಶ ದ್ವಾರಗಳನ್ನು ಗುರಿಯಾಗಿಸಿದೆ ಎಂದು ಅವರು ಹೇಳಿದ್ದಾರೆ. ಮೇ 10, 2025ರಂದು ನಡೆದ ಈ '88-ಗಂಟೆಗಳ ಯುದ್ಧ'ದ ನಂತರ ಪಾಕಿಸ್ತಾನವು ತಕ್ಷಣವೇ ಅಮೆರಿಕ ಮತ್ತು ಭಾರತದೊಂದಿಗೆ ಸಂಪರ್ಕ ಸಾಧಿಸಿ ಕದನ ವಿರಾಮಕ್ಕೆ ಒತ್ತಾಯಿಸಿತು. ಈ ರಾಜತಾಂತ್ರಿಕ ಧಾವಂತವೇ ಭಾರತದ ದಾಳಿ ಯಶಸ್ವಿಯಾಗಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಎಂದು ಕೂಪರ್ ವಿಶ್ಲೇಷಿಸಿದ್ದಾರೆ. ಪಾಕಿಸ್ತಾನದ ಪ್ರತಿದಾಳಿ 'ಆಪರೇಷನ್ ಬುನ್ಯಾನ್-ಉನ್-ಮರ್ಸೂಸ್' ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ವಿಫಲವಾಯಿತು. ಈ ಒಟ್ಟಾರೆ ಘಟನೆಯು ಭಾರತಕ್ಕೆ ಸಂದ ಜಯ ಎಂದು ಅವರು ಬಣ್ಣಿಸಿದ್ದಾರೆ