ಉಧಮ್ಪುರ: ಮೂವರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಮನೆಯೊಂದಕ್ಕೆ ಬಂದು ಆಹಾರ ಕೇಳಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಉಧಮ್ಪುರದ ಬಸಂತಗಢ ಪ್ರದೇಶದಲ್ಲಿ ಬಕರಾಲ್ ಕುಟುಂಬದ ಮನೆಗೆ ಬಂದಿದ್ದ ಭಯೋತ್ಪಾದಕರು ಆಹಾರವನ್ನು ಕೇಳಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೆಚ್ಚಿನ ಅಪಾಯವಿರುವ ಒಳನುಸುಳುವಿಕೆ ಪ್ರದೇಶಗಳಿರುವ ದಟ್ಟವಾದ ಕಾಡುಗಳಲ್ಲಿ ಶಂಕಿತರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮೂವರು ಶಂಕಿತ ಭಯೋತ್ಪಾದಕರು ಶುಕ್ರವಾರ ತಡರಾತ್ರಿ ಬಸಂತಗಢದ ಎತ್ತರದ ಪ್ರದೇಶದಲ್ಲಿರುವ ಚಿಂಗ್ಲಾ-ಬಲೋಥಾ ಗ್ರಾಮದಲ್ಲಿರುವ ಬಕರಾಲ್ ಕುಟುಂಬದ ಮನೆಯ ಬಾಗಿಲು ಬಡಿದಿದ್ದಾರೆ. ಅವರು ಆಹಾರವನ್ನು ಕೇಳಿದರು ಎಂದು ಮನೆ ಮಾಲೀಕರು ದೂರು ನೀಡಿದ ಬಳಿಕ ಬಸಂತಗಢದ ಸುತ್ತಮುತ್ತ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರು ಮನೆಗೆ ಬಂದು ಹೋದ ತಕ್ಷಣ ಬಕರಾಲ್ ಕುಟುಂಬದ ಮಾಲೀಕರು ಭಯಭೀತರಾಗಿ ಓಡಿಹೋಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿತ್ತು. ಭದ್ರತಾ ಪಡೆಯೊಂದಿಗೆ ಸೇರಿಕೊಂಡು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್ಪಿಎಫ್ ತಂಡಗಳು ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಶಂಕಿತ ಭಯೋತ್ಪಾದಕರು ಕೊನೆಯದಾಗಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಮೂವರು ಶಂಕಿತರು ಓಡಾಡಿರುವ ಕುರುಹುಗಳು ಪತ್ತೆಯಾಗಿವೆ. ಇಲ್ಲಿಯವರೆಗೆ ಯಾರನ್ನೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಕಿಸ್ತಾನದಿಂದ ಭಯೋತ್ಪಾದಕರು ಭಾರತದೊಳಗೆ ನುಸುಳಲು ಬಸಂತಗಢವನ್ನು ದಾರಿ ಮಾಡಿಕೊಂಡಿದ್ದಾರೆ. ಕಥುವಾ ವಲಯದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಕಾಶ್ಮೀರ ಕಣಿವೆಯನ್ನು ಪ್ರವೇಶಿಸುವ ಬದಲು ಇವರು ದೋಡಾ ಮತ್ತು ಕಿಶ್ತ್ವಾರ್ ಕಡೆಗೆ ಅಪಾಯಕಾರಿ ದಾರಿಯಲ್ಲಿ ಸಾಗಿ ಬರುತ್ತಾರೆ. ಈ ಪ್ರದೇಶದಲ್ಲಿ ಈಗ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. ಹಲವಾರು ಬಾರಿ ಎನ್ಕೌಂಟರ್ಗಳು ನಡೆದಿವೆ. ಜಮ್ಮು ವಿಭಾಗದಲ್ಲಿರುವ ಅತ್ಯಂತ ಸೂಕ್ಷ್ಮ ಅರಣ್ಯ ಕಾರಿಡಾರ್ಗಳಲ್ಲಿ ಇದು ಒಂದಾಗಿದೆ. ಇಲ್ಲಿನ ಹಳ್ಳಿ ಹಳ್ಳಿಗಳಲ್ಲಿ ಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿವೆ. ಸ್ನಿಫರ್ ನಾಯಿಗಳು, ಯುಎವಿಗಳು ಮತ್ತು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದರೆ ತಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.