image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಟಿ ಸಿ ಎಸ್ ಗೆ ಸಮನ್ಸ್!

ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಟಿ ಸಿ ಎಸ್ ಗೆ ಸಮನ್ಸ್!

ಪುಣೆ: ಐಟಿ ಕ್ಷೇತ್ರದ ನೌಕರರ ಹಿತಾಸಕ್ತಿಯನ್ನು ಪ್ರತಿನಿಧಿಸುವ ನಸೆಂಟ್ ಇನ್ಫರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಸಲ್ಲಿಸಿದ ದೂರುಗಳ ಹಿನ್ನೆಲೆಯಲ್ಲಿ, ಪುಣೆಯ ಕಾರ್ಮಿಕ ಆಯುಕ್ತರ ಕಚೇರಿಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (TCS) ಗೆ ಸಮನ್ಸ್‌ಗಳನ್ನು ಜಾರಿ ಮಾಡಿದೆ. NITES ಉಲ್ಲೇಖಿಸಿರುವ ದೂರಿನಲ್ಲಿ ಟಿಸಿಎಸ್ ಕಂಪನಿ ಕಾನೂನುಬಾಹಿರವಾಗಿ ನೌಕರರನ್ನು ವಜಾಗೊಳಿಸುತ್ತಿದೆ ಹಾಗೂ ಅನ್ಯಾಯ ಮಾಡುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದೆ. ಈ ಕುರಿತು NITES ತನ್ನ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಜುಲೈ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಕೃತಕ ಬುದ್ಧಿಮತ್ತೆಯ ಅಲೆಗಳಿಂದ ಉಂಟಾದ ವ್ಯವಹಾರಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಸಂಸ್ಥೆಯು ತನ್ನ ಜಾಗತಿಕ ಕಾರ್ಯಪಡೆಯ 2% ರಷ್ಟು ಅಂದರೆ ಸುಮಾರು 12,000 ಉದ್ಯೋಗಿಗಳನ್ನು ಒಂದು ವರ್ಷದಲ್ಲಿ ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿತ್ತು.

ಸಮನ್ಸ್ ನೀಡಿರುವ ಬಗ್ಗೆ ಪ್ರಕಟಣೆ ಹೊರಡಿಸಿರುವ NITES, ಕಳೆದ ಕೆಲವು ತಿಂಗಳುಗಳಿಂದ ಭಾರತದೆಲ್ಲೆಡೆ ವಿವಿಧ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವ ಟಿಸಿಎಸ್ ನೌಕರರಿಂದ ದಿಡೀರ್ ವಜಾಗೊಳಿಸುವಿಕೆ, ಬಲವಂತದ ರಾಜೀನಾಮೆ, ಶಾಸನಬದ್ಧ ಬಾಕಿ ಪಾವತಿಗಳ ನಿರಾಕರಣೆ ಮತ್ತು ಅನ್ಯಾಯಕರ ಕೆಲಸದ ಒತ್ತಡದ ಸಂಬಂಧ ಅನೇಕ ದೂರುಗಳು ನಮ್ಮ ಬಳಿ ಬಂದಿವೆ. ಎಲ್ಲ ಕುಂದು ಕೊರತೆಗಳನ್ನು ಹಾಗೂ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಿದ ಬಳಿಕ, NITES ಪೀಡಿತ ಉದ್ಯೋಗಿಗಳಿಗೆ ಕಾರ್ಮಿಕ ಆಯುಕ್ತರ ಮುಂದೆ ಔಪಚಾರಿಕ ದೂರುಗಳನ್ನು ಸಲ್ಲಿಸಲು ನೆರವಾಯಿತು. ಈ ವಿಚಾರದಲ್ಲಿ ಕಾರ್ಮಿಕ ಆಯುಕ್ತರ ವಿಚಾರಣೆ ಆರಂಭವಾಗಿದೆ. ಕಾನೂನುಬಾಹಿರವಾಗಿ ನೌಕರರನ್ನು ವಜಾಗೊಳಿಸಲು ಯಾವ ಕಂಪನಿಯೂ ಅಧಿಕಾರ ಪಡೆದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ಒತ್ತಿ ಹೇಳುತ್ತದೆ. ಕಾನೂನಿನ ಪ್ರಕಾರ ಸರಿಯಾದ ಪ್ರಕ್ರಿಯೆ ಅನುಸರಿಸುವುದು ಪ್ರತಿಯೊಬ್ಬ ಉದ್ಯೋಗದಾತನ ಕರ್ತವ್ಯ ಎಂದು NITES ಹೇಳಿದೆ. ಇನ್ನು ಸಮನ್ಸ್‌ಗೆ ಸಂಬಂಧಿಸಿದ ವಿಚಾರಣೆ ನವೆಂಬರ್ 18, 2025ಕ್ಕೆ ನಿಗದಿಯಾಗಿದೆ.

ಸ್ವಯಂಪ್ರೇರಿತವಾಗಿರಲಿ ಅಥವಾ ಅನೈಚ್ಛಿಕವಾಗಿರಲಿ. ತಪ್ಪು ವಜಾ, ಬಲವಂತದ ರಾಜೀನಾಮೆ, ಬಾಕಿ ಪಾವತಿಗಳ ವಿಳಂಬ ಅಥವಾ ನಿರಾಕರಣೆ, ಕೆಲಸದ ಜಾಗದಲ್ಲಿನ ಒತ್ತಡ ಅಥವಾ ಅನ್ಯಾಯದ ಚಿಕಿತ್ಸೆ ಎದುರಿಸಿದ ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವಂತೆ NITES ಮನವಿ ಮಾಡಿದೆ. "ನಿಮಗೆ ಲಭ್ಯವಿರುವ ಕಾನೂನು ರಕ್ಷಣೆಗಳನ್ನು ಅರ್ಥಮಾಡಿಕೊಳ್ಳಲು, ದೂರುಗಳನ್ನು ಸಿದ್ಧಪಡಿಸಲು ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ಸಲ್ಲಿಸಲು ಅಗತ್ಯವಾದ ಸಹಾಯವನ್ನು NITES ನೀಡುತ್ತದೆ. ಇದೇ ರೀತಿಯ ಅನ್ಯಾಯವನ್ನು ಅನುಭವಿಸಿದವರು ಮುಂದೆ ಬಂದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು," ಎಂದು ಸಂಸ್ಥೆ ಹೇಳಿದೆ.

ಕಂಪನಿಯ ಇತ್ತೀಚಿನ ಗಳಿಕೆ ಸಭೆಯಲ್ಲಿ, ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಸುದೀಪ್ ಕುನ್ನುಮಾಲ್ ಸಂಸ್ಥೆಯ ಸಿಬ್ಬಂದಿಗಳ ಲೇ ಆಫ್ ಬಗ್ಗೆ ಸ್ಪಷ್ಟನೆ ನೀಡಿ, ನಾವು ಯಾವುದೇ ಗುರಿಯನ್ನು ನಿಗದಿಪಡಿಸಿಲ್ಲ. ಸ್ವಯಂಪ್ರೇರಿತ ಹಾಗೂ ಅನೈಚ್ಛಿಕ ವಜಾಗಳನ್ನು ಒಟ್ಟುಗೂಡಿಸಿದಾಗ ಸುಮಾರು 20,000 ನಿವ್ವಳ ಸಿಬ್ಬಂದಿ ಇಳಿಕೆಯಾಗಿದೆ. ಆದರೆ, ನಾವು ಎಲ್ಲರನ್ನೂ ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ. ಕಲಿಕೆ ಮತ್ತು ಅಭಿವೃದ್ಧಿಗೆ ಮಾಡಿರುವ ನಮ್ಮ ಹೂಡಿಕೆಗಳನ್ನು ಗಮನಿಸಿದರೆ, ಪ್ರತಿಯೊಬ್ಬರಿಗೂ ನ್ಯಾಯಸಮ್ಮತ ಅವಕಾಶ ನೀಡಲಾಗುತ್ತದೆ. ಮಧ್ಯಮ ಮತ್ತು ಹಿರಿಯ ಹಂತದ ಕೆಲವರಿಗೆ ಅವರ ಕೌಶಲ್ಯಗಳಿಗೆ ತಕ್ಕ ಹುದ್ದೆಗಳು ಲಭ್ಯವಿರದ ಪರಿಸ್ಥಿತಿಯಲ್ಲಿ, ಅವರನ್ನು ಬಹಳ ಕಾಳಜಿಯೊಂದಿಗೆ, ಮಾನವೀಯವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಕುನ್ನುಮಾಲ್ ಹೇಳಿದರು.

Category
ಕರಾವಳಿ ತರಂಗಿಣಿ