image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಹೆಲ್ಮೆಟ್‌ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತ ಕಡಿತಗೊಳಿಸಿ ಹೈಕೋರ್ಟ್‌ ಆದೇಶ

ಹೆಲ್ಮೆಟ್‌ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತ ಕಡಿತಗೊಳಿಸಿ ಹೈಕೋರ್ಟ್‌ ಆದೇಶ

ಬೆಂಗಳೂರು : ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಬೈಕ್‌ ಸವಾರನೋರ್ವ ಹೆಲ್ಮೆಟ್‌ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಏಳೂವರೆ ಲಕ್ಷ ರು. ಕಡಿತಗೊಳಿಸಿ ಹೈಕೋರ್ಟ್‌ ಆದೇಶಿಸಿದೆ. ಹೆಲ್ಮೆಟ್‌ ಧರಿಸದೆ ಇರುವುದು ಬೈಕ್‌ ಸವಾರನ ನಿರ್ಲಕ್ಷ್ಯವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ನಿಗದಿಪಡಿಸಿದ ಒಟ್ಟು 19,64,400 ರು. ಪರಿಹಾರದಲ್ಲಿ ನಿರ್ಲಕ್ಷ್ಯದ ಭಾಗವಾಗಿ ಶೇ.40ರಷ್ಟು ಹಣ ಅಂದರೆ 7,85,760 ರು. ಕಡಿತಗೊಳಿಸಿದೆ. ಅಪಘಾತದಿಂದಾಗಿ 2019ರಲ್ಲಿ ಮೃತಪಟ್ಟ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದ ನಿವಾಸಿ ಅವಿನಾಶ್‌ನ (23) ಕುಟುಂಬದವರಿಗೆ ಒಟ್ಟು 18,03,000 ರು. ಪರಿಹಾರ ನಿಗದಿಪಡಿಸಿ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ (ಎಂಎಟಿಸಿ) ಆದೇಶಿಸಿತ್ತು. ಈ ಪರಿಹಾರ ಪ್ರಮಾಣ ಹೆಚ್ಚಿದೆ ಎಂದು ಆಕ್ಷೇಪಿಸಿ ಅಘಾತಕ್ಕೆ ಕಾರಣವಾಗಿದ್ದ ಟ್ರ್ಯಾಕ್ಟರ್‌ವೊಂದಕ್ಕೆ ವಿಮಾ ಪಾಲಿಸಿ ನೀಡಿದ್ದ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು, ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಅವರ ನೇತೃತ್ವದ ವಿಭಾಗೀಯ ಪೀಠ, ಪರಿಹಾರ ಮೊತ್ತ ಕಡಿತಗೊಳಿಸಿ ಆದೇಶಿಸಿದೆ

ಪ್ರಕರಣದಲ್ಲಿ ಅಪಘಾತ ಸಂಭವಿಸಿದ ವೇಳೆ ದ್ವಿಚಕ್ರ ಸವಾರನಾಗಿದ್ದ ಮೃತ ಅವಿನಾಶ್‌ ಹೆಲ್ಮೆಟ್‌ ಧರಿಸಿರಲಿಲ್ಲ. ದಾಖಲೆಗಳ ಪ್ರಕಾರ, ಬೈಕ್‌ನಲ್ಲಿ ಅವಿನಾಶ್ ವೇಗದಿಂದ ಮತ್ತು ನಿರ್ಲಕ್ಷ್ಯದಿಂದ ಬಂದು ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅಪಘಾತದಲ್ಲಿ ಆತನ ನಿರ್ಲಕ್ಷ್ಯ ಪ್ರಮಾಣವು ಶೇ.40ರಷ್ಟಿದೆ. ಟ್ರಾಕ್ಟರ್‌ ಚಾಲಕನ ನಿರ್ಲಕ್ಷ್ಯ ಶೇ.60ರಷ್ಟಿದೆ ಎಂಬುದಾಗಿ ಪೀಠ ತೀರ್ಮಾನಿಸಿತು. ಮೃತಪಟ್ಟಾಗ ಅವಿನಾಶ್‌ ವಯಸ್ಸು, ಪಡೆಯುತ್ತಿದ್ದ ಸಂಬಳ, ಅವರ ಕುಟುಂಬದವರು ಅನುಭವಿಸಿದ ಅವಲಂಬನೆ ನಷ್ಟ/ನೋವು, ಅಂತ್ಯಕ್ರಿಯೆ ಖರ್ಚು ಮತ್ತು ಆತ ಭವಿಷ್ಯದಲ್ಲಿ ಗಳಿಸಬಹುದಾಗಿದ್ದ ಸಂಭಾವ್ಯ ಆದಾಯವನ್ನು ಲೆಕ್ಕಹಾಕಿದ ಪೀಠವು ಒಟ್ಟು 19,64,400 ರು. ಪರಿಹಾರ ಪಡೆಯಲು ಅನಿನಾಶ್ ಕುಟುಂಬದವರು ಅರ್ಹರಾಗಿದ್ದಾರೆ. ಆದರೆ, ಅಪಘಾತ ನಡೆದಾಗ ಮೃತ ಹೆಲ್ಮೆಟ್‌ ಧರಿಸದ್ದಕ್ಕೆ ಶೇ.40ರಷ್ಟು ಅಂದರೆ ಒಟ್ಟು 7,85,760 ರು. ಅನ್ನು ನಿರ್ಲಕ್ಷ್ಯದ ಭಾಗವಾಗಿ ನಿಗದಿಯಾದ ಪರಿಹಾರ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿತು. ಜೊತೆಗೆ, ಉಳಿದ 11,78,640 ರು. ಅನ್ನು ಶೇ.6ರಷ್ಟು ವಾರ್ಷಿಕ ಬಡ್ಡಿದರದೊಂದಿಗೆ ಆರು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

Category
ಕರಾವಳಿ ತರಂಗಿಣಿ