ಹೊಸದಿಲ್ಲಿ: ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಿಲ್ಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸಾವಿರಾರು ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಚಾಲಕರು ಮತ್ತು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೆದ್ದಾರಿಯ ಆರು ಪಥಗಳ ಕಾಮಗಾರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತಿರುವು ರಸ್ತೆಗಳು ಮತ್ತು ಸರ್ವಿಸ್ ರಸ್ತೆಗಳು ಜಲಾವೃತಗೊಂಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ರಸ್ತೆಗಳ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು, ನೀರು ನಿಂತ ಪರಿಣಾಮ ವಾಹನಗಳು ಜಾರುತ್ತಿವೆ. ಇದು ಟ್ರಾಫಿಕ್ ಸಮಸ್ಯೆಯನ್ನು ಬಿಗಡಾಯಿಸಿದೆ. ಈ ಬೃಹತ್ ಟ್ರಾಫಿಕ್ ಜಾಮ್ ರೋಹ್ಟಾಸ್ನಿಂದ ಆರಂಭವಾಗಿ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಔರಂಗಾಬಾದ್ವರೆಗೂ ಹಬ್ಬಿದೆ. ವಾಹನಗಳು ಎಷ್ಟು ನಿಧಾನವಾಗಿ ಚಲಿಸುತ್ತಿವೆ ಎಂದರೆ, 24 ಗಂಟೆಗಳಲ್ಲಿ ಕೇವಲ ಐದು ಕಿಲೋಮೀಟರ್ ದೂರ ಸಾಗಲು ಸಾಧ್ಯವಾಗುತ್ತಿದೆ. ಕೆಲವೇ ಕಿಲೋಮೀಟರ್ ದೂರವನ್ನು ಕ್ರಮಿಸಲು ಗಂಟೆಗಟ್ಟಲೆ ಸಮಯ ಬೇಡುತ್ತಿದೆ, "ಕಳೆದ 30 ಗಂಟೆಗಳಲ್ಲಿ ನಾವು ಕೇವಲ 7 ಕಿಲೋಮೀಟರ್ ಕ್ರಮಿಸಿದ್ದು, ಟೋಲ್, ರಸ್ತೆ ತೆರಿಗೆ ಎಲ್ಲವನ್ನೂ ಪಾವತಿಸಿದರೂ ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕುವಂತಾಗಿದೆ. ಸ್ಥಳೀಯ ಆಡಳಿತ ಅಥವಾ ಎನ್ಎಚ್ಎಐ ಸಿಬ್ಬಂದಿ ಯಾರೂ ಇಲ್ಲಿ ಕಾಣಿಸುತ್ತಿಲ್ಲ," ಎಂದು ಟ್ರಕ್ ಚಾಲಕರು ಅಳಲು ತೋಡಿಕೊಂಡಿದ್ದಾರೆ. "ಎರಡು ದಿನಗಳಿಂದ ಟ್ರಾಫಿಕ್ನಲ್ಲಿ ಸಿಲುಕಿದ್ದು, ಹಸಿವು, ಬಾಯಾರಿಕೆಯಿಂದ ನಮ್ಮ ಸ್ಥಿತಿ ದಯನೀಯವಾಗಿದೆ," ಎಂದು ಹಲವು ಚಾಲಕರು ಹೇಳಿದ್ದಾರೆ.
ಈ ಬೃಹತ್ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲು ಸ್ಥಳೀಯ ಆಡಳಿತವಾಗಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ (ಎನ್ಎಚ್ಎಐ) ಅಥವಾ ರಸ್ತೆ ನಿರ್ಮಾಣ ಕಂಪನಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಯಾಣಿಕರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಎನ್ಎಚ್ಎಐ ಯೋಜನಾ ನಿರ್ದೇಶಕ ರಂಜಿತ್ ವರ್ಮಾ ಅವರು ಕ್ಯಾಮೆರಾ ಮುಂದೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಟ್ರಾಫಿಕ್ನಿಂದಾಗಿ ವ್ಯಾಪಾರ-ವಹಿವಾಟಿನ ಮೇಲೂ ಹೊಡೆತ ಬಿದ್ದಿದ್ದು, ಹಣ್ಣು, ತರಕಾರಿಯಂತಹ ಬೇಗನೆ ಹಾಳಾಗುವ ವಸ್ತುಗಳನ್ನು ಸಾಗಿಸುತ್ತಿರುವ ಚಾಲಕರು ಭಾರೀ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಇದಲ್ಲದೆ ಆಂಬ್ಯುಲೆನ್ಸ್ಗಳು, ತುರ್ತು ಸೇವೆಗಳ ವಾಹನಗಳು, ಮತ್ತು ಪ್ರವಾಸಿ ವಾಹನಗಳೂ ತೀವ್ರ ಸಂಕಷ್ಟಕ್ಕೆ ಸಿಲುಕಿವೆ.