ತಿರುಮಲ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 20 ವರ್ಷಗಳಲ್ಲಿ 1000 ಕೋಟಿ ಆಸ್ತಿ ಮಾಡಿರುವ ಬಗ್ಗೆ ವರದಿಯಾಗಿದೆ. ತಮ್ಮ 20ರ ಹರೆಯದಲ್ಲಿ ಕ್ಲಾರ್ಕ್ ಆಗಿ ತಿರುಪತಿ ದೇವಾಲಯದ ಪೆದ್ದ ಜೀಯಾನಗರ ಮಠಕ್ಕೆ ಸೇರಿದ ರವಿಕುಮಾರ್ ಅವರು ಅಲ್ಲಿನ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಕೆಲಸವಾದ ಹುಂಡಿ ಹಣವನ್ನು ಲೆಕ್ಕ ಮಾಡುವ ಕ್ಲಾರ್ಕ್ ಆಗಿ ಕೆಲಸಕ್ಕೆ ಸೇರಿದ್ದು, ದಿನಕ್ಕೆ 4 ರಿಂದ 16 ಕೋಟಿಯವರೆಗೂ ಬರುತ್ತಿದ್ದ ಹಣವನ್ನು ಇಲ್ಲಿ ಲೆಕ್ಕ ಮಾಡಲಾಗುತ್ತದೆ. ಸುಮಾರು 3 ದಶಕಗಳವರೆಗೆ ಅಂದರೆ 2023ರ ಏಪ್ರಿಲ್ 29ರವರೆಗೆ ಆತ ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿಯಾಗಿಯೇ ಅಲ್ಲಿ ಜನಪ್ರಿಯತೆ ಪಡೆದಿದ್ದರು. ಆದರೆ 2023ರ ಏಪ್ರಿಲ್ನಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಸಿಸಿಟಿವಿಯ ದೃಶ್ಯಾವಳಿಯನ್ನು ತಪಾಸಣೆ ಮಾಡಿದಾಗ ರವಿಕುಮಾರ್ ಅವರ ನಿಜವಾದ ಮುಖ ಬೆಳಕಿಗೆ ಬಂದಿತ್ತು. 108 ಕ್ಯಾಮೆರಾಗಳಿದ್ದ ದೇವಾಲಯದ ದೇಣಿಗೆಗಳನ್ನು ಹೊಂದಿರುವ 22,000 ಚದರ ಅಡಿ ವಿಸ್ತೀರ್ಣದ ಹೊಸದಾದ ಪರಕಮಣಿ ಸಂಕೀರ್ಣದಲ್ಲಿ ರವಿ ಕುಮಾರ್ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ಆ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ನಂತರ ಸಿಸಿಟಿವಿಗಳನ್ನು ಮತ್ತಷ್ಟು ಪರಿಶೀಲಿಸಿದಾಗ ಅವರು 100 ಯುಎಸ್ ಡಾಲರ್ನಷ್ಟು ಬಿಲ್ಗಳನ್ನು ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಬರೀ ಇಷ್ಟೇ ಅಲ್ಲ ಈ ಬಗ್ಗೆ ವಿಚಾರಿಸಿದಾಗ ರವಿ ಕುಮಾರ್ 20 ವರ್ಷಗಳಿಗೂ ಹೆಚ್ಚು ಕಾಲ ದೇವಸ್ಥಾನದಿಂದ ಕಳ್ಳತನ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದ್ದರು.
ಹೀಗೆ ಕದ್ದ ಹಣದಿಂದ ರವಿಕುಮಾರ್ ತಿರುಪತಿ, ಚೆನ್ನೈ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಹಲವು ಕಡೆ ಆಸ್ತಿಗಳನ್ನು ಖರೀದಿ ಮಾಡಿದರು. ಮೂಲತಃ 14 ಕೋಟಿ ಮೌಲ್ಯದಲ್ಲಿ ಈ ಆಸ್ತಿಗಳನ್ನು ಖರೀದಿಸಲಾಗಿತ್ತು. ಆದರೆ ತಪ್ಪೊಪ್ಪಿಗೆಯ ನಂತರವೂ ಪ್ರಕರಣ ಊಹಿಸಲಾಗದ ತಿರುವು ಪಡೆದುಕೊಂಡಿತ್ತು. ಇತ್ತ 2023ರ ಮೇ 19ರಂದು ರವಿಕುಮಾರ್ ಹಾಗೂ ಆತನ ಪತ್ನಿ ಇವುಗಳಲ್ಲಿ ಒಟ್ಟು 7 ಆಸ್ತಿಗಳನ್ನು ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ಗೆ ದಾನವಾಗಿ ನೀಡಿದ್ದರು. ಇವುಗಳಲ್ಲಿ5 ಆಸ್ತಿ ತಿರುಪತಿಯಲ್ಲಿ ಹಾಗೂ ಎರಡು ಆಸ್ತಿ ಚೆನ್ನೈನಲ್ಲಿದ್ದವು. ಈ ಆಸ್ತಿಗಳನ್ನು ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದಾಗಿ ದಾನ ಮಾಡುತ್ತಿರುವುದಾಗಿ ದಂಪತಿ ಹೇಳಿಕೊಂಡಿದ್ದರು. ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಈ ದೇಣಿಗೆಯನ್ನು ಪಡೆದುಕೊಳ್ಳುವುದಕ್ಕೆ ಅನುಮೋದನೆಯನ್ನು ನೀಡಿದ್ದರು. ಆದರೆ ಮೇ 30 ರ ಹೊತ್ತಿಗೆ ತಿರುಮಲ ಪೊಲೀಸರು ರವಿಕುಮಾರ್ ದಂಪತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು ಆದರೆ ಕೆಲವೇ ತಿಂಗಳುಗಳ ನಂತರ, ಸೆಪ್ಟೆಂಬರ್ 9 ರಂದು, ರವಿ ಕುಮಾರ್ ಮತ್ತು ದೂರುದಾರ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ. ಸತೀಶ್ ಕುಮಾರ್ ರಾಜಿ ಮಾಡಿಕೊಳ್ಳಲು ಲೋಕ ಅದಾಲತ್ ಅನ್ನು ಸಂಪರ್ಕಿಸಿದರು. ಹೀಗಾಗಿ ಈ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು ಮತ್ತು ರವಿ ಕುಮಾರ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು ಒಂದು ರಾತ್ರಿಯೂ ಅವರು ಜೈಲಿನಲ್ಲಿ ಕಳೆಯಲಿಲ್ಲ. ಆದರೆ ಯಾವಾಗ 2024ರಲ್ಲಿ ಆಂಧ್ರಪ್ರದೇಶಲ್ಲಿ ವೈಎಸ್ಆರ್ ಸರ್ಕಾರ ಬದಲಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಟಿಡಿ ಸರ್ಕಾರ ಬಂತೋ ಎಲ್ಲವೂ ಬದಲಾಯ್ತು. ಇದೇ ಸಮಯದಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣವೂ ಬೆಳಕಿಗೆ ಬಂದಿದ್ದು, ನಿಮಗೆ ನೆನಪಿರಬಹುದು. ದೇವಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಂತರಿಕ ವಿಚಾರಣೆ ನಡೆಯಿತು. ಈ ವೇಳೆ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ. ಸತೀಶ್ ಕುಮಾರ್ ಪೊಲೀಸರ ತೀವ್ರ ಒತ್ತಡದ ಕಾರಣಕ್ಕೆ ರಾಜಿಗೆ ಒಪ್ಪಿದ್ದಾಗಿ ಹೇಳಿಕೊಂಡಿದ್ದರು.