ನವದೆಹಲಿ : ಜಿಎಸ್ಟಿ 2.0 ಸುಧಾರಣೆ ಮೂಲಕ ಜನಸಮಾನ್ಯರ ಹೊರೆಯನ್ನು ಕಡಿಮೆ ಮಾಡಿರುವ ಕೇಂದ್ರ ಸರಕಾರ, ತೆರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಯೋಜನೆ ರೂಪಿಸುತ್ತಿದೆ.ಜಿಎಸ್ಟಿ ಸುಧಾರಣೆ ಬಳಿಕ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ''ದೇಶವನ್ನು ಒಂದು ರಾಷ್ಟ್ರ, ಒಂದು ತೆರಿಗೆ ವ್ಯವಸ್ಥೆಯಡಿ ತರಲು 2017ರಲ್ಲಿ ಜಿಎಸ್ಟಿ ಜಾರಿಗೆ ತರಲಾಯಿತು. 2025ರಲ್ಲಿ ಎರಡು ಶ್ರೇಣಿ ತೆರಿಗೆ ಜಾರಿಗೊಳಿಸಲು ಮಹತ್ವದ ಸುಧಾರಣೆ ತರಲಾಗಿದೆ. ಜಿಎಸ್ಟಿ ಸರಳೀಕರಣಗೊಳಿಸಲಾಗಿದೆ. ತೆರಿಗೆ ರಚನೆಯನ್ನು ಸುಗಮಗೊಳಿಸಲಾಗಿದೆ. ಸಂಕೀರ್ಣತೆ ಕಡಿಮೆ ಮಾಡಲಾಗಿದೆ. ಬಳಕೆದಾರರು-ವ್ಯಾಪಾರ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯೊಂದಿಗೆ ಜಿಎಸ್ಟಿ 3.0 ಬರಲಿದೆ. ಮುಂದಿನ ಸುಧಾರಣೆಯಲ್ಲಿ ಸ್ಥಿರತೆ, ನ್ಯಾಯಸಮ್ಮತೆ, ಸುಗಮ ಅನುಷ್ಠಾನದ ಮೇಲೆ ಗಮನ ಕೊಡಲಾಗುವುದು. ತೆರಿಗೆ ಗೊಂದಲ ನಿವಾರಣೆಗೆ ಜತೆಗೆ ವ್ಯಾಪಾರಿಗಳ ಮೇಲಿನ ಹೊರೆ ಕಡಿಮೆ ಮಾಡುವುದು. ನೇರ ತೆರಿಗೆ ವ್ಯವಸ್ಥೆ ರೂಪಿಸುವುದು ನಮ್ಮ ಮುಂದಿನ ಗುರಿಯಾಗಿದೆ,'' ಎಂದು ವಿವರಿಸಿದರು. "ಸಣ್ಣ ವ್ಯಾಪಾರಿಗಳ ಗೊಂದಲ ತಪ್ಪಿಸಲು ಮತ್ತು ಜನಸಾಮಾನ್ಯರ ಹೊರೆಯನ್ನು ಕಡಿಮೆ ಮಾಡಲು ಸರಕಾರ ಆದ್ಯತೆ ಮುಂದುವರಿಸಲಿದೆ,'' ಎಂದು ಹೇಳಿದರು.
''ದೇಶಾದ್ಯಂತ ಜಾರಿಯಲ್ಲಿದ್ದ ಬೇರೆ ಬೇರೆ ಮಾದರಿಯ ತೆರಿಗೆ ಪದ್ಧತಿ ರದ್ದುಗೊಸುವ ಮೂಲಕ ಏಕತೆ ತರಲು ಜಿಎಸ್ಟಿ 1.0 ಜಾರಿಗೆ ಬಂತು. ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ನಾಂದಿಯಾಯಿತು. ಜಿಎಸ್ಟಿ 2.0ರಲ್ಲಿ ತೆರಿಗೆ ವ್ಯವಸ್ಥೆ ಸರಳೀಕರಣಗೊಂಡಿದೆ. ಪಾರದರ್ಶಕತೆ ತರುವ ಜತೆಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಜನ ಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಾಗಿದೆ,'' ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಜನಸಾಮಾನ್ಯರ ಹೊರೆಯನ್ನು ಕಡಿಮೆ ಮಾಡಲು ಕೈಗೊಂಡ ಜಿಎಸ್ಟಿ ಸುಧಾರಣೆಯ ಲಾಭವು ಜನರಿಗೆ ತಲುಪುವಂತೆ ನೋಡಲು ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಸೆಪ್ಟೆಂಬರ್ 22ರಿಂದ ನಮ್ಮ ತಂಡ ದೊಡ್ಡ ವಿಚಕ್ಷಣಾ ಅಭಿಯಾನ ನಡೆಸಲಿದೆ. ಆ ಮೂಲಕ ಜಿಎಸ್ಟಿ ದರ ಇಳಿಕೆಯ ಲಾಭವನ್ನು ಕಂಪನಿಗಳು ದರ ಇಳಿಕೆಯಲ್ಲಿ ಜನರಿಗೆ ತಲುಪಿಸುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಜಿಎಸ್ಟಿ ಸುಧಾರಣೆ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಆದರೆ, ಈ ತೀರ್ಮಾನದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾಳಜಿಗಿಂತಲೂ ರಾಜ್ಯ ಸರಕಾರಗಳು ಸತತ ಒತ್ತಡ ಹೇರಿರುವುದೇ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. 2017ರಲ್ಲಿ ಜಿಎಸ್ಟಿಯಲ್ಲಿಇದ್ದ ದೋಷಗಳನ್ನು ಈಗ ಸರಿಪಡಿಸಲಾಗಿದೆ ಎಂದಿರುವ ಸಿದ್ದರಾಮಯ್ಯ, ಜಿಎಸ್ಟಿ ಪರಿಹಾರ ಸುಂಕದಲ್ಲಿ ಕೇಂದ್ರವು ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.