image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನ್ಯಾಯಮೂರ್ತಿ ಯಶವಂತ್ ವರ್ಮಾ ಪದಚ್ಯುತಿಗೊಳಿಸುವ ಪ್ರಕ್ರಿಯೆಗೆ ಸಂಸದರಿಂದ ಉಭಯ ಸದನಗಳಲ್ಲಿ ನೋಟಿಸ್

ನ್ಯಾಯಮೂರ್ತಿ ಯಶವಂತ್ ವರ್ಮಾ ಪದಚ್ಯುತಿಗೊಳಿಸುವ ಪ್ರಕ್ರಿಯೆಗೆ ಸಂಸದರಿಂದ ಉಭಯ ಸದನಗಳಲ್ಲಿ ನೋಟಿಸ್

ನವದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿ 150ಕ್ಕೂ ಅಧಿಕ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೋಟಿಸ್​ ಸಲ್ಲಿಸಿದ್ದಾರೆ. ಮಳೆಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಆಡಳಿತ ಮತ್ತು ವಿರೋಧ ಪಕ್ಷಗಳ 145 ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್​ ನೀಡಿದರು. ನ್ಯಾ.ವರ್ಮಾ ಅವರ ಪದಚ್ಯುತಿ ಪ್ರಕ್ರಿಯೆಯಲ್ಲಿ ಬಿಜೆಪಿ, ಕಾಂಗ್ರೆಸ್​, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ತೆಲುಗು ದೇಶಂ ಪಕ್ಷ, ಜನತಾದಳ ಯುನೈಟೆಡ್, ಜನತಾದಳ ಸೆಕ್ಯುಲರ್, ಜನ ಸೇನಾ ಸೇರಿದಂತೆ ಹಲವು ಪಕ್ಷಗಳ ಸಂಸದರು ನೋಟಿಸ್​​ನಲ್ಲಿ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಹಿ ಮಾಡಿದವರಲ್ಲಿ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ, ಬಿಜೆಪಿಯ ರವಿಶಂಕರ್​ ಪ್ರಸಾದ್​, ಕಾಂಗ್ರೆಸ್​ನ ಕೆ.ಸಿ.ವೇಣುಗೋಪಾಲ್​, ಕೆ.ಸುರೇಶ್​, ಡಿಎಂಕೆ ನಾಯಕ ಟಿ.ಆರ್.ಬಾಲು, ಆರ್​ಎಸ್​ಪಿ ಸದಸ್ಯ ಎನ್​.ಕೆ.ಪ್ರೇಮಚಂದ್ರನ್​ ಹಾಗೂ ಐಯುಎಂಎಲ್​ ಸಂಸದ ಇ.ಟಿ.ಮೊಹಮದ್​ ಬಶೀರ್​ ಸೇರಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್​ ಧನಕರ್​ ಅವರಿಗೂ ಸಂಸದರು ನೋಟಿಸ್​ ನೀಡಿದ್ದಾರೆ. ಮೇಲ್ಮನೆಯ 63 ಸದಸ್ಯರು ನೋಟಿಸ್​ಗೆ ಸಹಿ ಹಾಕಿದ್ದಾರೆ.

ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಪದಚ್ಯುತಗೊಳಿಸಲು ಕೋರಿ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಸಂಸತ್ತು ಪ್ರಕ್ರಿಯೆ ಆರಂಭಿಸಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಯಶವಂತ್​ ವರ್ಮಾ ಅವರ ನಿವಾಸದಲ್ಲಿ ಹಣದ ಕಂತೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಪ್ರಕರಣ ಬಯಲಾದ ಬಳಿಕ ಈ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್​ನ ಆಂತರಿಕ ತನಿಖೆಯಲ್ಲಿ ವರ್ಮಾ ಅವರ ವಿರುದ್ಧ ಆರೋಪ ಸಾಬೀತಾಗಿತ್ತು. ಬಳಿಕ ನ್ಯಾ.ವರ್ಮಾ ಅವರನ್ನು ದೆಹಲಿ ಹೈಕೋರ್ಟ್​ನಿಂದ ಅಲಹಾಬಾದ್​ ಹೈಕೋರ್ಟ್​ಗೆ ವರ್ಗ ಮಾಡಲಾಗಿತ್ತು. ಆರೋಪ ಸಾಬೀತಾದ ಬಳಿಕ ಪದಚ್ಯುತಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್​ ಖನ್ನಾ ಶಿಫಾರಸು ಮಾಡಿದ್ದರು.

Category
ಕರಾವಳಿ ತರಂಗಿಣಿ