ಜಾರ್ಖಂಡ್ : ಸಿಪಿಐ (ಮಾವೋವಾದಿ) ಕಮಾಂಡರ್ ಸೇರಿದಂತೆ ಒಟ್ಟಾರೆ 8.45 ಕೋಟಿ ಮೌಲ್ಯದ ಬಹುಮಾನ ಘೋಷಿತವಾಗಿರುವ 55 ನಕ್ಸಲರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಾರ್ಖಂಡ್ ಪೊಲೀಸರು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ನಕ್ಸರ್ ಶೋಧ ಕಾರ್ಯವನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಇದುವರೆಗೂ ನಕ್ಸಲ್ ನಿಗ್ರಹ ಪಡೆಗಳ ಮುಂದೆ 10 ಮಂದಿ ಶರಣಾಗತರಾಗಿದ್ದು, 17 ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಭದ್ರತಾ ಪಡೆಗಳಿಂದ ಲೂಟಿ ಮಾಡಿದ 31 ಶಸ್ತ್ರಾಸ್ತ್ರಗಳೂ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2025ರ ಆರಂಭದಿಂದ ಇಲ್ಲಿವರೆಗೂ ಅಂದರೆ ಜೂನ್ವರೆಗೆ ಒಟ್ಟಾರೆ 197 ನಕ್ಸಲರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಪ್ರಾದೇಶಿಕ ಸಮಿತಿ ಸದಸ್ಯರು, ಒಬ್ಬ ವಲಯ ಕಮಾಂಡರ್, ಒಬ್ಬ ಉಪ-ವಲಯ ಕಮಾಂಡರ್ ಮತ್ತು ಏಳು ಪ್ರದೇಶ ಕಮಾಂಡರ್ಗಳು ಸೇರಿದ್ದಾರೆ. ಒಟ್ಟಾರೆ 10 ನಕ್ಸಲರು ಪೊಲೀಸರ ಮುಂದೆ ಇದುವರೆಗೂ ಶರಣಾಗಿದ್ದು, ಎನ್ಕೌಂಟರ್ನಲ್ಲಿ 17 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಐಜಿಪಿ ಮೈಕಲ್ ಎಸ್ ರಾಜ್ ತಿಳಿಸಿದರು. 8.45 ಕೋಟಿ ಬಹುಮಾನ ಘೋಷಿತ 55 ಮಾವೋವಾದಿಗಳ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಈ 55 ನಕ್ಸಲರಲ್ಲಿ ಪ್ರಮುಖ ಮಾವೋ ಕಮಾಂಡರ್ ಆದ ಮಿಸಿರ್ ಬೆಸ್ರಾ, ಆಸಿಮ್ ಮಂಡಲ್, ಅನಲ್ ಡಾ ಮತ್ತು ಅನೂಜ್ ಕೂಡ ಇದ್ದು, ಇವರು ತಲಾ ಕೋಟಿ ಬಹುಮಾನ ಘೋಷಿತ ನಕ್ಸಲರಾಗಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.ಈ ಕಾರ್ಯಾಚರಣೆ ವೇಳೆ 113 ಶಸ್ತ್ರಾಸ್ತ್ರಗಳನ್ನು ಹಾಗೂ 8,591 ಮದ್ದು ಗುಂಡು, 177 ಕೆಜಿ ಸ್ಪೋಟಕ ವಸ್ತು ಮತ್ತು 179 ಐಇಡಿ ಬಾಂಬ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್ ಮತ್ತು ಒಡಿಶಾ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು 3,811 ಕೆಜಿ ಜಿಲೆಟಿನ್ ಗಳನ್ನು ಇದುವರೆಗೂ ವಶಕ್ಕೆ ಪಡೆಯಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಸಂಪೂರ್ಣ ನಕ್ಸಲ್ ಮುಕ್ತ ಮಾಡಲು ಪಣತೊಟ್ಟಿದೆ. ಹೀಗಾಗಿ ನಕ್ಸಲರ ವಿರುದ್ಧ ಎಡಬಿಡದೇ ಕಾರ್ಯಾಚರಣೆ ಮುಂದುವರಿಸಲಾಗಿದೆ. ಒಂದೆಡೆ ನಕ್ಸಲರನ್ನು ಶರಣಾಗತಿ ಆಗುವಂತೆ ಮಾಡಲಾಗುತ್ತಿದ್ದರೆ ಮತ್ತೊಂದು ಕಡೆ ನಿರಂತರ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ.