ಭುವನೇಶ್ವರ್: ಪ್ರಾಧ್ಯಾಪಕರ ಲೈಂಗಿಕ ಕಿರುಕುಳದ ವಿರುದ್ಧ ಕಾಲೇಜು ಕ್ರಮ ಕೈಗೊಳ್ಳದೆ ನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದ ಬಾಲಸೋರ್ ಮೂಲದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ಓಡಿಶಾ ರಾಜ್ಯ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಪಿಐ, ಸಿಪಿಐ-ಎಂ, ಎಸ್ಯುಸಿಐ, ಎಐಡಿಎಸ್ಒ ಮತ್ತು ಎಐವೈಎಫ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಒಡಿಶಾ ಬಂದ್ಗೆ ಕರೆ ನೀಡಲಾಗಿತ್ತು. ಬಂದ್ ಹಿನ್ನೆಲೆ ರಾಜ್ಯದೆಲ್ಲೆಡೆ ಬಿಗಿ ಬಂದೋಬಸ್ತ್ ನಡೆಸಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮದ ಮುನ್ನೆಚ್ಚರಿಕೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಬಾಲಸೋರ್ನ ಕಾಲೇಜೊಂದರ ಎರಡನೇ ವರ್ಷದ ಇಂಟಿಗ್ರೇಟೆಡ್ ಬಿ.ಎಡ್ ವಿದ್ಯಾರ್ಥಿನಿ ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ದೂರಿನ ವಿರುದ್ಧ ಕ್ರಮಕ್ಕೆ ಮುಂದಾಗದ ಪ್ರಾಂಶುಪಾಲರು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿ ಪ್ರಾಂಶುಪಾಲರ ಕೋಣೆ ಎದುರೇ ಬೆಂಕಿ ಹಚ್ಚಿಕೊಂಡಿದ್ದರು. ಶೇ 95ರಷ್ಟು ಸುಟ್ಟುಗಾಯದಿಂದ ಬಳಲಿದ ವಿದ್ಯಾರ್ಥಿನಿ ಸೋಮವಾರ ಭುವನೇಶ್ವರದ ಏಮ್ಸ್ನಲ್ಲಿ ಸಾವನ್ನಪ್ಪಿದ್ದರು. ಈ ಘಟನೆಗೆ ರಾಷ್ಟ್ರದಾದ್ಯಂತ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿತ್ತು. ಬಂದ್ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಅಂಗಡಿ- ಮುಂಗಟ್ಟು, ಮಾರುಕಟ್ಟೆ, ಶಾಲಾ ಮತ್ತು ಕಾಲೇಜುಗಳು ಬಂದ್ ಆಗಿದ್ದು, ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಅನೇಕ ಕಡೆ ರೈಲ್ವೆ ಮತ್ತು ಬಸ್ ಸೇವೆಗಳಿಗೆ ತಡೆಯಾಗಿದ್ದು, ಪ್ರಯಾಣಿಕರು ಪರದಾಡುವಂತೆ ಆಗಿದೆ.
ಲೋಕಸೇವಾ ಭವನದ ಸುತ್ತಲೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸಚಿವರು ಮತ್ತು ಕಾರ್ಯದರ್ಶಿಗಳಿಗೆ ಪೈಲಟ್ ವಾಹನಗಳ ಮೂಲಕ ಬೆಂಗಾವಲು ನೀಡಲಾಗಿದೆ. ಪ್ರಮುಖ ನಗರ ಮತ್ತು ಆಯಾಕಟ್ಟಿನ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಸದ್ಯ ರಾಜ್ಯದಲ್ಲಿ ಬಂದ್ ಶಾಂತಿಯುತವಾಗಿದ್ದು, ಸಾರ್ವಜನಿಕರಿಗೂ ಕೂಡ ಸಹಾಕರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂದ್ ಹಿನ್ನೆಲೆ ಮಾತನಾಡಿರುವ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್, ಇದು ರಾಜಕೀಯವಲ್ಲ. ಇದು ನಮ್ಮ ಮಗಳ ಪರವಾಗಿ ನಿಲ್ಲುವುದಾಗಿದೆ. ನಾವು ಇದೀಗ ಕ್ರಮಕ್ಕೆ ಮುಂದಾಗದೇ ಹೋದಾಗ ಪ್ರತಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯವೂ ಅಪಾಯದಲ್ಲಿರಲಿದೆ. ಸುರಕ್ಷತೆ ನಡೆಸುವಲ್ಲಿ ವಿಫಲವಾದ ಆರೋಪದ ಹೊಣೆ ಹೊತ್ತು ರಾಜ್ಯದ ಶಿಕ್ಷಣ ಸಚಿವರು, ಸ್ಥಳೀಯ ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.