ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮಾವಿನ ರಾಜತಾಂತ್ರಿಕತೆ ಸಂಬಂಧ ಬಹು ಹಿಂದಿನಿಂದ ಬಂದಿರುವ ರೂಢಿಯಾಗಿದೆ. ಅದರಂತೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಆದರೆ, ಕಳೆದ ಆಗಸ್ಟ್ನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪದಚ್ಯುತಿಗೊಂಡ ನಂತರ ಎರಡು ದೇಶದ ನಡುವಣ ದ್ವಿಪಕ್ಷೀಯ ಸಂಬಂಧಗಳಲ್ಲಿ ಉದ್ವಿಗ್ನಗೊಂಡಿರುವ ಈ ಹೊತ್ತಿನಲ್ಲಿನ ಈ ಮಾವಿನ ರಾಜತಾಂತ್ರಿಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಂಗ್ಲಾದೇಶದ ಮಾಧ್ಯಮಗಳ ವರದಿಯಂತೆ, ಯುನೂಸ್ ಭಾರತ ಮತ್ತು ಬಾಂಗ್ಲಾದ ನಡುವಿನ ಸಂಬಂಧ ಸುಧಾರಣೆ ಕಾಣುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಹರಿಭಂಗ ಮಾವಿನ ತಳಿಯಲ್ಲಿ 1000 ಕೆಜಿ ಮಾವನ್ನು ಕಳುಹಿಸಿದ್ದಾರೆ. ಈ ಕುರಿತ ವರದಿ ಪ್ರಕಾರ, ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಢಾಕಾದಿಂದ ನವದೆಹಲಿಗೆ ಒಂದು ಸಾವಿರ ಕೆಜಿ ಹರಿಭಂಗ್ ಮಾವನ್ನು ಕಳುಹಿಸಲಾಗಿದೆ. ಭಾರತೀಯ ಪ್ರಧಾನಿ ಕಚೇರಿ, ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳ ಗಣ್ಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ಸಂಬಂಧಪಟ್ಟ ಗಣ್ಯರಿಗೆ ಮಾವಿನ ಹಣ್ಣುಗಳನ್ನು ತಲುಪಿಸುವುದಾಗಿ ಅವರು ತಿಳಿಸಿದ್ದಾರೆ.
ಮೋದಿ ಹೊರತಾಗಿ, ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಾದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ತ್ರಿಪುರಾ ಸಿಎಂ ಮಣಿಕ್ ಸರ್ಕಾರ್ ಅವರಿಗೆ ಕೂಡ ಯೂನಸ್ ಮಾವಿನಹಣ್ಣನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ವರದಿಯೊಂದರ ಪ್ರಕಾರ, ತ್ರಿಪುರಾ ಸಿಎಂಗೆ 300 ಕೆಜಿ ಮಾವನ್ನು ಕಳುಹಿಸಲಾಗಿದೆ. ಬಾಂಗ್ಲಾದೇಶದ ವಾಯುವ್ಯ ಭಾಗದಲ್ಲಿ ವಿಶೇಷರಾಬಿ ರಾಂಗ್ಪುರ್ ಜಿಲ್ಲೆಯಲ್ಲಿ ಹರಿಭಂಗ್ ಮಾವಿನ ತಳಿಯನ್ನು ಉತ್ಪಾದನೆ ಮಾಡಲಾಗುತ್ತಿದೆ. ಉತ್ತರಭಾಗದ ಜಿಲ್ಲೆಗಳಲ್ಲಿ ಈ ಹರಿಭಂಗ್ ಮಾವಿನ ತಳಿ ಸಿಕ್ಕಾಪಟ್ಟೆ ಪ್ರುಖ್ಯಾತಿ ಪಡೆದಿದೆ. ದುಂಡಾಗಿರುವ ಈ ಮಾವುಗಳು ಹೆಚ್ಚು ತಿರುಳು ಹೊಂದಿದ್ದು, ಒಂದೊಂದು 200 ರಿಂದ 400 ಗ್ರಾಂ ತೂಗುತ್ತದೆ. 2021ರ ಜುಲೈನಲ್ಲಿ ಎರಡು ನೆರೆಯ ದೇಶಗಳ ನಡುವಿನ ಸ್ನೇಹವಾಗಿ ಬಾಂಗ್ಲಾದೇಶದಿಂದ 2600 ಕೆಜಿ ಹರಿಭಂಗ ಮಾವಿನ ಹಣ್ಣುನ್ನು ಭಾರತ ಸ್ವೀಕರಿಸಿತ್ತು. ಪಶ್ಚಿಮ ಬಂಗಾಳದ ಬಂಗಾಂವ್ನ ಪೆಟ್ರಾಪೋಲ್ ಗಡಿಯ ಮೂಲಕ ಈ ಹಣ್ಣನ್ನು ರವಾನೆ ಮಾಡಲಾಗಿತ್ತು.